ಬಂಟ್ವಾಳ, ಜ. 19 (DaijiworldNews/TA): ನವೀಕೃತ ಸಿದ್ದಕಟ್ಟೆ ಚರ್ಚಿಗೆ ಸಂಭ್ರಮದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಸರ್ವಧರ್ಮೀಯರ ಸಹಭಾಗಿತ್ವ, ಶಿಸ್ತಿನ ಮೆರವಣಿಗೆ, ಕಲಾವಿದರ ನೃತ್ಯ ಸಂಗೀತದ ಸೊಬಗು, ಬಹುದೊಡ್ಡ ಮಟ್ಟದ ವೈವಿಧ್ಯಮಯ ಕಾಣಿಕೆ -ದೇಣಿಗೆ ಸಿದ್ಧಕಟ್ಟೆ ಸಂತ ಪ್ಯಾಟ್ರಿಕ್ ಚರ್ಚಿನ ನವೀಕರಣದ ಸಂದರ್ಭದಲ್ಲಿ ಹಮ್ಮಿಕೊಂಡ ಹೊರೆ ಕಾಣಿಕೆಯ ಮೆರುಗನ್ನು ಇಮ್ಮಡಿಗೊಳಿಸಿತು.








ಶ್ರೀ ದುರ್ಗಾ ಮಹಮ್ಮಾಯಿ ಕೋರಿಯರ್ ಫ್ರೆಂಡ್ಸ್ ಹಾಗೂ ಎಲ್ಲರ ಕೂಡುವಿಕೆಯಿಂದ ಮೆರವಣಿಗೆ ಜರುಗಿತು. ನೂರು ವರ್ಷಗಳ ಇತಿಹಾಸದ ಸಿದ್ದಕಟ್ಟೆ ನವೀಕರಣಗೊಂಡ ಚರ್ಚಿನ ಉದ್ಘಾಟನೆಯ ಸಂದರ್ಭದಲ್ಲಿ ಹಮ್ಮಿಕೊಂಡ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಮೂಡಬಿದ್ರೆ, ಬೆಳ್ತಂಗಡಿ, ಬಂಟ್ವಾಳ ವಲಯಗಳ ವಿವಿಧ ಚರ್ಚಿನ, ಸ್ಥಳೀಯ ಪರಿಸರದ ವಿವಿಧ ದೇವಸ್ಥಾನಗಳ ಮತ್ತು ಮಸೀದಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ 42 ಹೊರೆ ಕಾಣಿಕೆಗಳು ಅರ್ಪಣೆಗೊಂಡವು. ಚರ್ಚ್ ಮುಂಭಾಗದಲ್ಲಿ ಪ್ರತಿಯೊಬ್ಬರನ್ನು ಗುರುತಿಸಿ ಗೌರವಿಸಲಾಯಿತು. ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ಹೊರೆಕಾಣಿಕೆಗೆ ಚರ್ಚ್ ಧರ್ಮ ಗುರುಗಳಾದ ವಂದನೀಯ ಡೇನಿಯಲ್ ಡಿಸೋಜ, ಪೂಂಜ ಕ್ಷೇತ್ರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುದರ್ಶನ್ ಶೆಟ್ಟಿ, ಮತ್ತು ದಾರುಸ್ಸಲಾಂ ಜುಮ್ಮಾ ಮಸೀದಿ ಕಲ್ಕುರಿ ಆಡಳಿತ ಮಂಡಳಿಯ ಅಧ್ಯಕ್ಷ ಸಿರಾಜ್ ಅವರು ಚಾಲನೆ ನೀಡಿದರು. ಮೈಕಲ್ ಮೇರಸ್ ಸ್ವಾಗತಿಸಿದರು.
ಮೈಕಲ್ ಡಿಕೋಸ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಲ್ಲಾಸ್ ಫರ್ನಾಂಡಿಸ್ ಮತ್ತು ವಿಕ್ಟರ್ ಮೊರಾಸ್ ಕೇಂದ್ರ ಮೈದಾನದಲ್ಲಿ ಸರ್ವರನ್ನು ಸ್ವಾಗತಿಸುವ ಕಾರ್ಯಕ್ರಮ ನಿರೂಪಿಸಿದರು. ಹೊರೆ ಕಾಣಿಕೆ ಸ್ವೀಕಾರ ಸಂದರ್ಭದಲ್ಲಿ ಚರ್ಚ್ ವತಿಯಿಂದ ಉಪಾಧ್ಯಕ್ಷ ಸುನಿಲ್ ಸಿಕ್ವೇರಾ ಕಾರ್ಯದರ್ಶಿ ಪ್ರವೀಣ್ ಕುಟಿನ್ಹಾ ಸಂಯೋಜಕ ಪ್ರವೀಣ್ ಕ್ರಾಸ್ತಾ ತಂಡದವರನ್ನು ಪರಿಚಯಿಸಿ ಸ್ವಾಗತಿಸಿದರು. ಗುರುಗಳಾದ ಫಾ ರೋಹನ್ ಲೋಬೊ, ಫಾ ಕಿರಣ್ ಪಿಂಟೊ, ಫಾದರ್ ರೋಶನ್ ಕ್ರಾಸ್ತಾ, ಫಾ ಮೌರಿಸ್ ಡಿಸೊಜ, ಫಾ ಅನಿಲ್ ಲೋಬೊ ಮುಖಂಡರಾದ ಶ್ರೀ ಪಿಯುಸ್ ರೊಡ್ರಿಗಸ್ , ಸ್ಟ್ಯಾನಿ ಲೋಬೊ , ದುರ್ಗಾ ದಾಸ್ ಶೆಟ್ಟಿ, ಎಲಿಯಾಸ್ ಸಾಂಕ್ತಿಸ್, ಪ್ರಕಾಶ್ ಕಾರತ್, ಉದ್ಘಾಟನಾ ಸಮಿತಿ ಸಂಚಾಲಕ ಜೆರಾಲ್ಡ್ ಡಿಕೋಸ್ಟ ಉಪಸ್ಥಿತರಿದ್ದರು.