ಕಾರ್ಕಳ, ಜ. 18 (DaijiworldNews/AA): ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಖಾಲಿ ಮನೆಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಪ್ರಸ್ತುತ ಮಂಗಳೂರಿನ ಗಂಜಿಮಠ, ಮೊಗರು ಗ್ರಾಮದ ನಿವಾಸಿ ಮನೋತೋಷ್ ಕಾಯಲ್(39) ಬಂಧಿತ ಆರೋಪಿ.
ಈ ಆರೋಪಿಯು ಬೆಳಿಗ್ಗೆ ಸಮಯದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, ಹಲವು ದಿನಗಳಿಂದ ಬೀಗ ಹಾಕಿರುವ ಖಾಲಿ ಮನೆಗಳನ್ನು ಗುರುತಿಸಿ ಬೀಗ ಒಡೆದು ಕಳ್ಳತನ ನಡೆಸುತ್ತಿದ್ದನು. ಈತನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 143/2025 ಕಲಂ 331(3), 305 ಭಾರತೀಯ ನ್ಯಾಯ ಸಂಹಿತೆ-2023 ರಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಮನೆಯಲ್ಲಿದ್ದ ಬ್ಯಾಟರಿಯನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ರವರ ಮಾರ್ಗದರ್ಶನದಲ್ಲಿ, ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ ಅವರ ನಿರ್ದೇಶನದಂತೆ, ಸಿಪಿಐ ಕಾರ್ಕಳ ಮಂಜಪ್ಪ ಅವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಎಂ.ಎಸ್., ಪಿಎಸ್ಐ ಸುಂದರ, ಎಎಸ್ಐ ಪ್ರಕಾಶ, ಎಎಸ್ಐ ಸುಂದರ ಗೌಡ, ಹೆಡ್ ಕಾನ್ಸ್ಟೆಬಲ್ಗಳಾದ ರುದ್ರೇಶ್ ಹಾಗೂ ಚಂದ್ರಶೇಖರ್, ಪೊಲೀಸ್ ಕಾನ್ಸ್ಟೆಬಲ್ಗಳಾದ ಸಂತೋಷ್, ಮಾಂತೇಶ್ ಮತ್ತು ಜಿಲ್ಲಾ ಹಾಗೂ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ಅವರನ್ನೊಳಗೊಂಡ ತಂಡವು ಆರೋಪಿಯನ್ನು ಬಂಧಿಸಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.