ಪುತ್ತೂರು, ಜ. 11 (DaijiworldNews/AA): ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರದ ದಿಮ್ಮಿಗಳನ್ನು ಉಪ್ಪಿನಂಗಡಿ ಅರಣ್ಯ ವಲಯದ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಸಕಲೇಶಪುರದಿಂದ ಮಂಗಳೂರಿಗೆ ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಿಕೊಂಡ ವಾಹನ ಮತ್ತು ಮರದ ದಿಮ್ಮಿಗಳ ಅಂದಾಜು ಮೌಲ್ಯ ಸುಮಾರು 7 ರಿಂದ 8 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ವಿನಯ್ ಕುಮಾರ್, ಪ್ರವೀಣ್ ಪಿ., ಗಸ್ತು ಅರಣ್ಯ ಪಾಲಕರಾದ ವಿನಯ ಚಂದ್ರ, ಶಿವಾನಂದ ಕುದುರಿ, ಜಗದೀಶ್ ಕೆ.ಎನ್. ಹಾಗೂ ಚಾಲಕರಾದ ಕಿಶೋರ್ ಮತ್ತು ದಿನೇಶ್ ಪಾಲ್ಗೊಂಡಿದ್ದರು.