ಮಂಗಳೂರು, ಜ. 10 (DaijiworldNews/TA): ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸರ್ಕಾರ ಸಮಾವೇಶ ನಡೆಸುತ್ತಿರುವ ನಡುವೆಯೇ, ಮಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಪಣಂಬೂರು ಬೀಚ್ ಮೇಲೆ ನವಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ಕಣ್ಣಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಪಣಂಬೂರು ಬೀಚ್ ಪ್ರದೇಶವನ್ನು ತಮ್ಮ ಸುಪರ್ದಿಗೆ ನೀಡುವಂತೆ ಎನ್ಎಂಪಿಎ ಜಿಲ್ಲಾಧಿಕಾರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರು ನಗರದ ಪಣಂಬೂರು ಬೀಚ್ ಪ್ರಕೃತಿ ಸೌಂದರ್ಯದಿಂದ ಕೂಡಿದ, ಕರಾವಳಿಯ ಪ್ರತಿಷ್ಠಿತ ಬೀಚ್ಗಳಲ್ಲಿ ಒಂದಾಗಿದೆ. ಇದು ಸ್ವಚ್ಛತೆ, ಉತ್ತಮ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಲಭ್ಯವಿರುವ ಸೌಲಭ್ಯಗಳ ಕಾರಣದಿಂದ ಜನರನ್ನು ಆಕರ್ಷಿಸುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಇಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಪ್ರತಿ ವರ್ಷ ಐದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಪಣಂಬೂರು ಬೀಚ್ಗೆ ಭೇಟಿ ನೀಡುತ್ತಾರೆ.
ಜಲ ಕ್ರೀಡೆಗಳು, ಬೋಟಿಂಗ್ನಂತಹ ಸಾಹಸ ಚಟುವಟಿಕೆಗಳು, ಮನಮೋಹಕ ಸೂರ್ಯಾಸ್ತದ ದೃಶ್ಯಗಳು ಈ ಬೀಚ್ನ ವಿಶೇಷತೆಯಾಗಿವೆ. ಅಲ್ಲದೆ, ಪ್ರತಿ ವರ್ಷ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವೂ ಇಲ್ಲಿ ನಡೆಯುತ್ತಿದ್ದು, ಪಣಂಬೂರು ಬೀಚ್ಗೆ ಅಂತಾರಾಷ್ಟ್ರೀಯ ಮಟ್ಟದ ಗುರುತನ್ನು ತಂದಿದೆ. ಇಂತಹ ಮಹತ್ವದ ಪ್ರವಾಸಿ ತಾಣವನ್ನು ಎನ್ಎಂಪಿಎ ವಿಸ್ತರಣೆಯ ಹೆಸರಿನಲ್ಲಿ ವಶಪಡಿಸಿಕೊಳ್ಳಲು ಮುಂದಾಗಿರುವುದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಪಣಂಬೂರು ಹೋರಾಟಗಾರ ಹರೀಶ್ ಕುಮಾರ್ ಹೇಳುವಂತೆ, “ಕರಾವಳಿಯ ಅತ್ಯಂತ ಸುಂದರ ಮತ್ತು ಪ್ರತಿಷ್ಠಿತ ಬೀಚ್ ಪಣಂಬೂರು. ಈಗಾಗಲೇ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳು ಜಾರಿಯಲ್ಲಿವೆ. ಈ ಜಾಗವನ್ನು ಎನ್ಎಂಪಿಎ ವಿಸ್ತರಣೆಗೆ ನೀಡುವುದು ಖಂಡನೀಯ. ಇದರ ವಿರುದ್ಧ ಹೋರಾಟ ಅನಿವಾರ್ಯ” ಎಂದು ಹೇಳಿದ್ದಾರೆ.
ಇತ್ತ ಪಣಂಬೂರು ಬೀಚ್ಗೆ ಹೋಗುವ ರಸ್ತೆಗಳ ಸ್ಥಿತಿಗತಿಗಳ ಕುರಿತು ಕೂಡ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್ಎಂಪಿಎಗೆ ಪ್ರತಿದಿನ ಟನ್ಗಟ್ಟಲೆ ಅದಿರು ಮತ್ತು ಇತರೆ ಕಚ್ಚಾವಸ್ತುಗಳನ್ನು ಸಾಗಿಸುವ ಟ್ರಕ್ ಹಾಗೂ ಲಾರಿಗಳು ಇದೇ ರಸ್ತೆಯನ್ನು ಬಳಸುತ್ತಿದ್ದು, ರಸ್ತೆಯುದ್ದಕ್ಕೂ ಧೂಳು ಮತ್ತು ಅದಿರು ಹುಡಿಗಳು ಹರಡುತ್ತಿವೆ. ಇದರಿಂದ ಪ್ರವಾಸಿಗರಿಗೆ ತೀವ್ರ ಅಸೌಕರ್ಯ ಉಂಟಾಗುತ್ತಿದೆ. ಕರಾವಳಿಯ ಬೃಹತ್ ಕೈಗಾರಿಕೆಯಾಗಿರುವ ಎನ್ಎಂಪಿಎ ಈ ಭಾಗದ ರಸ್ತೆ ಅಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ತನ್ನ ಸಿಎಸ್ಆರ್ ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಇನ್ನಾದರೂ ಸಿಎಸ್ಆರ್ ಅನುದಾನವನ್ನು ಈ ಭಾಗದ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎನ್ಎಂಪಿಎ ಅಧಿಕಾರಿಗಳು ಪಣಂಬೂರು ಬೀಚ್ ಜಾಗವನ್ನು ಬಿಟ್ಟುಕೊಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕುರಿತು ಜಿಲ್ಲಾಧಿಕಾರಿಗಳು ಮರುಪ್ರಶ್ನೆ ಮಾಡಿದಾಗ, ಆ ಪ್ರದೇಶದಲ್ಲಿ ಶಿಪ್ ಬ್ರೇಕಿಂಗ್ ಯಾರ್ಡ್ ನಿರ್ಮಿಸುವ ಚಿಂತನೆ ಇರುವುದಾಗಿ ಎನ್ಎಂಪಿಎ ಅಧಿಕಾರಿಗಳು ಹೇಳಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದು ನಿಜವಾದರೆ, ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪಣಂಬೂರು ಬೀಚ್ನ್ನು ರಕ್ಷಿಸುವ ಸಲುವಾಗಿ ಸ್ಥಳೀಯ ನಾಗರಿಕರು, ಸಂಘಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಪರ ಹೋರಾಟಗಾರರು ಒಗ್ಗೂಡಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಪಣಂಬೂರು ಬೀಚ್ ವಿಸ್ತರಣೆ ಮತ್ತು ಸಂರಕ್ಷಣೆಯ ಪರವಾಗಿ ದೊಡ್ಡ ಮಟ್ಟದ ಜನಾಂದೋಲನಕ್ಕೆ ವೇದಿಕೆ ಸಜ್ಜಾಗುತ್ತಿರುವ ಸೂಚನೆಗಳು ಕಾಣಿಸುತ್ತಿವೆ.