ಮಂಗಳೂರು, ಜ. 09 (DaijiworldNews/AK): ಕುಡುಪು ಗ್ರಾಮದ ಮಂಗಳಜ್ಯೋತಿಯಲ್ಲಿ ಕೊರಗ ಕುಟುಂಬಗಳಿಗೆ 2018 ರಲ್ಲಿ ನಗರ ಪಾಲಿಕೆ ಮಂಜೂರಾಗಿರುವ ಮನೆ ನಿವೇಶನ ಹಸ್ತಾಂತರಿಸದೆ ಸತಾಯಿಸುತ್ತಿರುವ ಮಂಗಳೂರು ನಗರ ಪಾಲಿಕೆ ಹಾಗು ಜಿಲ್ಲಾಡಳಿತದ ಅಮಾನವೀಯ ಧೋರಣೆಯನ್ನು ಖಂಡಿಸಿ, ತಕ್ಷಣವೇ ನಿವೇಶನ ಸ್ವಾಧೀನಕ್ಕೆ ನೀಡುವಂತೆ ಆಗ್ರಹಿಸಿ ಫಲಾನುಭವಿ ಕುಟುಂಬಗಳು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮಂಗಳೂರು ನಗರ ಪಾಲಿಕೆ ಕಚೇರಿ ಮುಂಭಾಗ 12 ತಾಸುಗಳ ಧರಣಿ ಸತ್ಯಾಗ್ರಹ ನಡೆಸಿದರು.

ಧರಣಿಯನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಿದರು. ಅವರು ಮಾತನಾಡುತ್ತಾ, ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಸ್ಪೀಕರ್ ಸಾಹೇಬರು ವೈಭವದ ಕರಾವಳಿ ಉತ್ಸವ, ಕಂಬಳಗಳ ಅಬ್ಬರದಲ್ಲಿ ಕಳೆದು ಹೋಗಿದ್ದಾರೆ. ಅವರಿಗೆ ಇಲ್ಲಿನ ಬಡವರು, ದುರ್ಬಲ ಸಮುದಾಯಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ಕಾಳಜಿ ಇಲ್ಲ. ಅಳಿವಿನಂಚಿನಲ್ಲಿ ಇರುವ ಕೊರಗ ಸಮುದಾಯದ ಕುರಿತು ಜಿಲ್ಲಾಡಳಿತದ ಸಭೆಗಳಲ್ಲಿ ಬಾಯಿಪ್ರಚಾರಕ್ಕೆ ಉತ್ಸಾಹದಿಂದ ಮಾತಾಡುವ ಇವರು, ಆ ತರುವಾಯ ಕೊರಗ ಸಮುದಾಯವನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ವಾಮಂಜೂರು ಮಂಗಳಜ್ಯೋತಿಯ 33 ಕೊರಗ ಕುಟುಂಬಗಳಿಗೆ ಮೀಸಲು ಮನೆ ನಿವೇಶನ ಹಸ್ತಾಂತರಿಸಲು ದೀರ್ಘಕಾಲದಿಂದ ಸತಾಯಿಸುತ್ತಿರುವುದು ಇದಕ್ಕೊಂದು ಉದಾಹರಣೆ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳಜ್ಯೋತಿಯ ಕೊರಗ ಕುಟುಂಬಗಳು ಕಳೆದ ಐದು ವರ್ಷಗಳಿಂದ ಹತ್ತಾರು ಬಾರಿ ಮಂಗಳೂರು ನಗರ ಪಾಲಿಕೆ ಮುಂಭಾಗ ಪ್ರತಿಭಟನೆ, ಧರಣಿ ನಡೆಸಿದರೂ ಮಂಜೂರು ಗೊಂಡಿರುವ ಮೀಸಲಿಟ್ಟಿರುವ ಮನೆ ನಿವೇಶನ ಹಸ್ತಾಂತರಿಸದೆ ಸತಾಯಿಸಲಾಗುತ್ತಿದೆ.
'ಕೊರಗ ಸಮುದಾಯದ ಮನೆ ಬಾಗಿಲಿಗೆ ಸರಕಾರವೇ ತೆರಳಲಿದೆ, ಅಧಿಕಾರಿಗಳು ಅವರ ಮನೆ ಬಾಗಿಲಿಗೆ ತೆರಳಿ ಸವಲತ್ತುಗಳನ್ನು ಒದಗಿಸಿಕೊಡಲಿದ್ದಾರೆ' ಎಂದು ಘೋಷಿಸಿಕೊಳ್ಳುವ ಸರಕಾರ ಹಾಗೂ ಜನಪ್ರತಿನಿಧಿಗಳು ಕನಿಷ್ಟ ಪ್ರಾಮಾಣಿಕತೆ ಇದ್ದರೆ ತಕ್ಷಣವೆ ಮನೆ, ನಿವೇಶನ ಹಸ್ತಾಂತರಿಸಲಿ, ಇಲ್ಲದಿದ್ದಲ್ಲಿ ಇವರ ಸುಳ್ಳಿನ ಮುಖವಾಡಗಳನ್ನು ಕಳಚಿ ಹಾಕಲಾಗುವುದು ಎಂದು ಎಚ್ಚರಿಸಿದರು.