ಕಾರ್ಕಳ, ಜ. 09 (DaijiworldNews/TA): ಬಾವಿಗೆ ಬಿದ್ದಿದ್ದ ವೃದ್ಧನನ್ನು ಅಗ್ನಿಶಾಮಕ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ರಕ್ಷಿಸಿದ್ದಾರೆ. ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ದೇವರ ಗುಡ್ಡೆ ಪ್ರದೇಶದಲ್ಲಿ, ಸುಮಾರು 30 ಅಡಿ ಆಳದ ಬಾವಿಗೆ ಚಂದು ಪರವ (70 ) ಎಂಬ ವರು ಬಿದ್ದ ಘಟನೆ ನಡೆದಿದೆ.


ಕೈ–ಕಾಲುಗಳಿಗೆ ಪ್ಯಾರಲಿಸಿಸ್ ಇರುವ ಕಾರಣ ಚಲನೆಗೆ ಅಸಹಾಯಕನಾಗಿದ್ದ ಚಂದು ಪರವ ಅವರು ಅಜಾಗರೂಕತೆಯಿಂದ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ, ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಚಂದಶೇಖರ್ ಅವರ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹರಿಪ್ರಸಾದ್, ಮುಜಂಬಿಲ್, ದಿನೇಶ್ ಹಾಗೂ ಗಣೇಶ್ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.