ಉಡುಪಿ, ಜ. 08 (DaijiworldNews/AA): ಖ್ಯಾತ ನಟ ಹಾಗೂ ನಿರ್ದೇಶಕ ಪ್ರಕಾಶ್ ರೈ ನೇತೃತ್ವದ 'ನಿರ್ದಿಗಂತ' ರಂಗ ಕೇಂದ್ರವು ಉಡುಪಿಯಲ್ಲಿ ತನ್ನ ಕರಾವಳಿ ವಲಯದ ರಂಗ ಚಟುವಟಿಕೆಗಳನ್ನು ಆರಂಭಿಸುವುದಾಗಿ ಘೋಷಿಸಿದೆ. ಮೈಸೂರಿನಲ್ಲಿ ಈಗಾಗಲೇ ಸಕ್ರಿಯವಾಗಿರುವ ನಿರ್ದಿಗಂತ, ಇನ್ನು ಮುಂದೆ ಉಡುಪಿಯಲ್ಲಿ ರಂಗ ತರಬೇತಿ, ನಾಟಕ ಕಾರ್ಯಾಗಾರ ಹಾಗೂ ರಂಗ ಉತ್ಸವಗಳನ್ನು ಆಯೋಜಿಸಲಿದೆ.




ಗುರುವಾರ ಉಡುಪಿ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರೈ ಅವರು, "ಜನವರಿ 18 ರಿಂದ 21 ರವರೆಗೆ ಉಡುಪಿಯ ಐವೈಸಿ ಯಕ್ಷಗಾನ ಕಲಾರಂಗದ ಸಭಾಂಗಣದಲ್ಲಿ 'ನಿರ್ದಿಗಂತ ರಂಗ ಉತ್ಸವ' ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಮಕ್ಕಳ ನಾಟಕಗಳು ಸೇರಿದಂತೆ ವಿವಿಧ ಪ್ರದರ್ಶನಗಳು ನಡೆಯಲಿವೆ. ಕರಾವಳಿಯ ರಂಗತಂಡಗಳೊಂದಿಗೆ ಸೇರಿ ರಂಗಭೂಮಿಯ ಬೆಳವಣಿಗೆಗೆ ಶ್ರಮಿಸುವುದು ನಮ್ಮ ಉದ್ದೇಶ" ಎಂದರು.
ಜ. 18ರ ಸಂಜೆ 6 ಗಂಟೆಗೆ 'ಕರಾವಳಿ ನಿರ್ದಿಗಂತ'ಕ್ಕೆ ಚಾಲನೆ ದೊರೆಯಲಿದೆ. ಖ್ಯಾತ ಸಾಹಿತಿ ಹಾಗೂ ಚಿಂತಕ ಫಕೀರ್ ಮೊಹಮ್ಮದ್ ಕಟಪಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಮಕ್ಕಳ ನಾಟಕ ಪ್ರದರ್ಶನಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ ಗಣೇಶ್ ಮಂದಾರ್ತಿ ಮತ್ತು ಇತರರು ಉಪಸ್ಥಿತರಿದ್ದರು.