ಬ್ರಹ್ಮಾವರ, ಜ. 08 (DaijiworldNews/AA): ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದಲ್ಲಿ ಗುರುವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮಟಪಾಡಿ ಗ್ರಾಮದಿಂದ ನೀಲಾವರಕ್ಕೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ಕಾಣಿಸಿಕೊಂಡ ಬೆಂಕಿಯು ವೇಗವಾಗಿ ಹರಡಿದೆ.





ರಸ್ತೆ ಪಕ್ಕದ 'ಡೈ ಮೇಕರ್' ಉದ್ದಿಮೆಯ ಬಳಿ ಮೊದಲು ಕಾಣಿಸಿಕೊಂಡ ಬೆಂಕಿ, ನಂತರ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸಿತು. ಬೆಂಕಿಯ ಕೆನ್ನಾಲಿಗೆಗೆ ರಸ್ತೆ ಬದಿಯ ಒಣ ಹುಲ್ಲು, ಪೊದೆಗಳು ಆಹುತಿಯಾಗಿವೆ. ಅಷ್ಟೇ ಅಲ್ಲದೆ, ಸಮೀಪದ ಅನಾನಸ್ ತೋಟಗಳು, ಅಡಿಕೆ ತೋಟ, ತೆಂಗು ಮತ್ತು ಹಲಸಿನ ಮರಗಳಿಗೂ ಬೆಂಕಿ ತಗುಲಿ ಹಾನಿಯಾಗಿದೆ.
ಈ ಪ್ರದೇಶದಲ್ಲಿ ಹಲವಾರು ಸಣ್ಣ ಕೈಗಾರಿಕೆಗಳಿದ್ದು, ಬೆಂಕಿ ಅತ್ತ ಹರಡುವ ಭೀತಿ ಎದುರಾಗಿತ್ತು. ಆದರೆ ಸ್ಥಳೀಯ ನಿವಾಸಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬ್ರಹ್ಮಾವರದಲ್ಲಿ ಅಗ್ನಿಶಾಮಕ ಠಾಣೆಗೆ ಹೆಚ್ಚಿದ ಬೇಡಿಕೆ
ಇತ್ತೀಚಿನ ದಿನಗಳಲ್ಲಿ ಬ್ರಹ್ಮಾವರ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಣಿ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಪ್ರಸ್ತುತ ತುರ್ತು ಸಂದರ್ಭಗಳಲ್ಲಿ ಉಡುಪಿಯಿಂದಲೇ ಅಗ್ನಿಶಾಮಕ ವಾಹನಗಳು ಬರಬೇಕಾಗಿದೆ. ಇದರಿಂದ ಸಮಯ ವಿಳಂಬವಾಗುತ್ತಿದ್ದು, ಬ್ರಹ್ಮಾವರ ತಾಲೂಕು ಕೇಂದ್ರದಲ್ಲಿ ಶಾಶ್ವತ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.