ಕುಂದಾಪುರ, ಜ. 07 (DaijiworldNews/AA): ದ್ವಿಚಕ್ರ ವಾಹನಕ್ಕೆ ಮರಳು ತುಂಬಿದ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರದ ಹಂಗಳೂರು ಯೂನಿಟಿ ಹಾಲ್ ಬಳಿ ಬುಧವಾರ ಸಂಭವಿಸಿದೆ.


ಮೂಲತಃ ಆಲೂರಿನವರಾದ ಪ್ರಸ್ತುತ ಕೋಟೇಶ್ವರದ ಅಂಕದಕಟ್ಟೆ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕೃಷ್ಣ ಮೂರ್ತಿ ಅಡಿಗ (57) ಮೃತ ದುರ್ದೈವಿ.
ವಾರದ ಹಿಂದಷ್ಟೇ ಖರೀದಿಸಿದ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಕೃಷ್ಣ ಮೂರ್ತಿ ಅಡಿಗ ಅವರು ಕೋಟೇಶ್ವರ ಕಡೆಗೆ ತೆರಳುತ್ತಿದ್ದರು. ಅವರು ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ತಮ್ಮ ದ್ವಿಚಕ್ರ ವಾಹನವನ್ನು ತಿರುಗಿಸಿದಾಗ ಕೋಟೇಶ್ವರ ಕಡೆಗೆ ತೆರಳುತ್ತಿದ್ದ ಮರಳು ತುಂಬಿದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಕೃಷ್ಣ ಮೂರ್ತಿ ಅಡಿಗ ಅಡುಗೆ ವೃತ್ತಿಯವರಾಗಿದ್ದು ಆಲೂರಿನಲ್ಲಿ ಅಡುಗೆ ಕಾರ್ಯದ ನಿಮಿತ್ತ ಸಿದ್ಧತೆಯಲ್ಲಿದ್ದರು ಎನ್ನಲಾಗಿದೆ. ನೇರಳಕಟ್ಟೆ ಸಮೀಪದ ಶೆಟ್ರಕಟ್ಟೆಯ ಬಸ್ - ಟಿಪ್ಪರ್ ಅಪಘಾತ ಜನರ ನೆನಪಿಂದ ಮಾಸುವ ಮುನ್ನವೇ ಇದೀಗ ಮತ್ತೊಂದು ಅಪಘಾತ ಸಂಭವಿಸಿದೆ.