ಸುಳ್ಯ, ಜ. 07 (DaijiworldNews/TA): ತಾಲೂಕಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಲ್ಲಿ ಕೃಷಿಕರಿಗೆ ಕಡಿಮೆ ಮೊತ್ತ ಪಾವತಿಯಾಗಿದೆ ಎಂಬ ವಿಚಾರದ ಕುರಿತು ಚರ್ಚಿಸಲು ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ, ಪ್ರಮುಖರ ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಡಿಮೆ ಮೊತ್ತ ಜಮೆ ಆಗಿದೆ. ಹವಾಮಾನದ ದತ್ತಾಂಶ ಸಲ್ಲಿಕೆಯಲ್ಲಿ ಆಗಿರುವ ವ್ಯತ್ಯಾಸದಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ. ಆದುದರಿಂದ ದಾಖಲಾದ ಮಳೆ, ಉಷ್ಣಾಂಶದ ಪರಿಷ್ಕೃತ ದತ್ತಾಂಶವನ್ನು ಪಡೆದು ಅದನ್ನು ವಿಮಾ ಕಂಪೆನಿಗೆ ನೀಡಿ ನ್ಯಾಯಯುತವಾದ ಪರಿಹಾರ ಒದಗಿಸಲು ಪ್ರಯತ್ನ ನಡೆಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಆಗ್ರಹಿಸಿದರು.
ಕಳೆದ ವರ್ಷಗಳಲ್ಲಿ ಸುಳ್ಯ ತಾಲೂಕಿನಲ್ಲಿ ಕೃಷಿಕರಿಗೆ ಉತ್ತಮ ಪರಿಹಾರ ಮೊತ್ತ ಪಾವತಿಯಾಗಿತ್ತು. ಕಳೆದ ವರ್ಷಗಳಿಂದ ಅಧಿಕ ಮಳೆ ಮತ್ತು ಉಷ್ಣಾಂಶ ದಾಖಲಾದರೂ ಈ ಬಾರಿ ವಿಮಾ ಪರಿಹಾರ ತುಂಬಾ ಕಡಿಮೆ ಪಾವತಿಯಾಗಿದೆ. ಹವಾಮಾನ ದತ್ತಾಂಶ ಸಲ್ಲಿಕೆಯಲ್ಲಾದ ವ್ಯತ್ಯಾಸದಿಂದ ಈ ರೀತಿ ಕಡಿಮೆ ಪರಿಹಾರ ಪಾವತಿ ಆಗಿರುವ ಸಾಧ್ಯತೆ ಇದೆ. ಇದನ್ನು ಸರಿ ಪಡಿಸಿ ನ್ಯಾಯಯುತವಾದ ಪರಿಹಾರ ದೊರಕಿಸಬೇಕು ಎಂದು ಪ್ರಮುಖರು ಆಗ್ರಹಿಸಿದರು.