ಮಂಗಳೂರು, ಜ. 06 (DaijiworldNews/ AK): ಪ್ರಸ್ತುತ ಕಾಲಘಟ್ಟದಲ್ಲಿ ಸೈಬರ್ ಪ್ರಕರಣ ಹೆಚ್ಚಾಗುತ್ತಿದ್ದು, ಬ್ಯಾಂಕ್ ವ್ಯವಸ್ಥೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದರೆ ಸಾಲದು, ಬ್ಯಾಂಕ್ ಹಾಗೂ ವ್ಯವಹಾರದ ಸುರಕ್ಷೆ ದೃಷ್ಟಿಯಿಂದ ಭದ್ರತಾ ಕ್ರಮಗಳು, ಬ್ಯಾಂಕ್ನಲ್ಲಿರುವ ಸೊತ್ತುಗಳಿಗೆ ವಿಮೆ ಮಾಡಿದರೆ ಸಂಭವಿಸಬಹುದಾದ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್.ರಾಜೇಂದ್ರ ಕುಮಾರ್ ಹೇಳಿದರು.


ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ಪ್ರಾಥಮಿಕ ಕೃಷಿ ಬ್ಯಾಂಕ್ಗಳು, ಕೃಷಿಯೇತರ ಬ್ಯಾಂಕ್ಗಳು, ಪಟ್ಟಣ ಸಹಕಾರಿ ಬ್ಯಾಂಕ್ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೈಬರ್ ಅಪರಾಧ ಹಾಗೂ ಕೋ-ಆಪರೇಟಿವ್ ಸೊಸೈಟಿಗಳಲ್ಲಿ ಭದ್ರತೆಗೆ ಸಂಬಂಧಿ ಸಿದಂತೆ ಮಾರ್ಗಸೂಚಿಗಳ ಪಾಲನೆ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಂಗಳೂರು ನಗರ ಪೊಲೀಸ್ ಡಿಸಿಪಿ ಕೆ.ರವಿಶಂಕರ್ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಡ್ರಗ್ಸ್ ಮತ್ತು ಸೈಬರ್ ಅಪರಾಧಗಳು ಸಮಾಜಕ್ಕೆ ಸವಾಲಾಗಿದೆ. ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭದ್ರತಾ ಕೊರತೆಯಿಂದಾಗಿ ಅಪರಾಧ ಪ್ರಕರಣಗಳು, ಸೈಬರ್ ವಂಚನೆಗಳು ಅಧಿಕವಾಗುತ್ತಿದ್ದು ಸಹಕಾರಿ ಬ್ಯಾಂಕ್ ಗಳು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್- ಡಿವೈಎಸ್ಪಿ ಮಂಜುನಾಥ್, ಡಿವೈಎಸ್ಪಿ ಬಂಟ್ವಾಳ ವಿಜಯ ಪ್ರಸಾದ್, ಡಿವೈಎಸ್ಪಿ ಬೆಳ್ತಂಗಡಿ ರೋಹಿಣಿ ಸಿ.ಕೆ., ಡಿವೈಎಸ್ಪಿ ಪುತ್ತೂರು ಅರುಣ್ ನಾಗೇಂದ್ರ, ಎಸ್ ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್, ಸೂರಿಂಜೆ, ನಿರ್ದೇಶಕರಾದ ಶಶಿ ಕುಮಾರ್ ರೈ ಬಾಲ್ಯೂಟ್ಟು, ದೇವಿಪ್ರಸಾದ್ ಶೆಟ್ಟಿ ಬೆಳಪು ಸೇರಿದಂತೆ ಹಲವರು ಉಪಸ್ಥಿತರಿದ್ದರು.