ಬೆಳ್ತಂಗಡಿ,ಜ. 04 (DaijiworldNews/TA): 55.48 ಗ್ರಾಂ ಎಂಡಿಎಂಎ ಸಹಿತ ವ್ಯಕ್ತಿಯೊಬ್ಬನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಉಮ್ಮರ್ ಶರೀಪ್ (42), ದೇರಳಕಟ್ಟೆ ಎಂದು ಗುರುತಿಸಲಾಗಿದೆ.

ನಗರದ ಪೊಲೀಸ್ ಠಾಣೆಯ ಪಿ.ಎಸ್.ಐ ಆನಂದ ಎಂ. ಅವರು ಸಿಬ್ಬಂದಿಗಳೊಂದಿಗೆ ಶನಿವಾರ ಸಂಜೆ 4.00 ಗಂಟೆಯಿಂದ ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ, ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಪೇಟೆಯ ಎಂ.ಎ. ಕಾಂಪ್ಲೇಕ್ಸ್ ಸಮೀಪ ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಅನುಮಾನಾಸ್ಪದವಾಗಿ ಕುಳಿತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ಉಮ್ಮರ್ ಶರೀಪ್ (42), ದೇರಳಕಟ್ಟೆ, ಮಂಗಳೂರು ಕೋಟೆಕಾರ್ ನಿವಾಸಿ ಎಂಬುದಾಗಿ ಗುರುತಿಸಲಾಗಿದ್ದು, ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಮಾರಾಟ ಉದ್ದೇಶದಿಂದ ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಾಲ್ಕು ಸಿಗರೇಟ್ ಪ್ಯಾಕೆಟ್ಗಳೊಳಗೆ ಎಂಟು ಪ್ಲಾಸ್ಟಿಕ್ ಕವರ್ಗಳಲ್ಲಿ ಸಂಗ್ರಹಿಸಿದ್ದ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದ್ದು, ಒಟ್ಟು ತೂಕ 55.48 ಗ್ರಾಂ ಆಗಿರುತ್ತದೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ರೂ.5,54,800/- ಎಂದು ಅಂದಾಜಿಸಲಾಗಿದೆ. ವಿಚಾರಣೆಯಲ್ಲಿ, ಈ ಮಾದಕ ವಸ್ತುವನ್ನು ಸುನ್ನತ್ ಕೆರೆ ನಿವಾಸಿ ನೌಷಾದ್ ಎಂಬಾತ ನೀಡಿರುವುದಾಗಿ ಆರೋಪಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತು ಸಾಗಾಟ ಹಾಗೂ ಮಾರಾಟಕ್ಕೆ ಬಳಸಿದ್ದ ಕೆಎ-19 ಎಂಜಿ-4669 ಸಂಖ್ಯೆಯ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದು, ಅದರ ಅಂದಾಜು ಮೌಲ್ಯ ರೂ.6,00,000/- ಆಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2026ರ ಅಡಿಯಲ್ಲಿ, ಎನ್ಡಿಪಿಎಸ್ ಕಾಯ್ದೆ ಕಲಂ 8(c) ಮತ್ತು 22(c)ರಂತೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.