ಮಂಗಳೂರು, ಜ. 04 (DaijiworldNews/TA): ಕ್ರಿಸ್ಮಸ್ ಹಬ್ಬದ ಆಚರಣೆಗಳ ವೇಳೆ ದೇಶವ್ಯಾಪ್ತಿ ಕ್ರೈಸ್ತರ ಮೇಲೆ ನಡೆದ ದಾಳಿಗಳನ್ನು ಖಂಡಿಸಿ, ಸಂತ ಸೆಬಾಸ್ಟಿಯನ್ ಚರ್ಚ್, ಬೆಂದೂರು, ಮಂಗಳೂರು ವತಿಯಿಂದ ಜನವರಿ 3ರಂದು ಸಂಜೆ 6.00 ಗಂಟೆಗೆ ಚರ್ಚಿನ ಮುಂಭಾಗದಲ್ಲಿ ಮೌನ ಪ್ರತಿಭಟನೆ ಆಯೋಜಿಸಲಾಯಿತು.


ಈ ಮೌನ ಪ್ರತಿಭಟನೆಯಲ್ಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ವಾಮಿ ವಾಲ್ಟರ್ ಡಿಸೋಜಾ, ಸಹಾಯಕ ಧರ್ಮಗುರುಗಳಾದ ವಂದನೀಯ ಸ್ವಾಮಿ ವಿವೇಕ್ ಪಿಂಟೋ ಹಾಗೂ ವಂದನೀಯ ಸ್ವಾಮಿ ಓಜ್ಮೊಂಡ್ ಡಿಸೋಜಾ, ವಂದನೀಯ ಸ್ವಾಮಿ ಅರುಣ್ ಲೋಬೊ (ಪ್ರಾಂಶುಪಾಲರು), ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ವಂದನೀಯ ಸ್ವಾಮಿ ವಾಲ್ಟರ್ ಡಿಸೋಜಾ ಅವರು ಎಲ್ಲರನ್ನು ಸ್ವಾಗತಿಸಿ, ಈ ಮೌನ ಪ್ರತಿಭಟನೆಯ ಉದ್ದೇಶವನ್ನು ವಿವರಿಸಿದರು.
ಭಕ್ತಾಧಿಗಳು ಮುಂಬತ್ತಿಯನ್ನು ಬೆಳಗಿಸಿ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡವುದರ ಮೂಲಕ, ತಮ್ಮ ನೋವನ್ನು ತೊರ್ಪಡಿಸಿದರು. ಹಾಗೂ ಶಾಂತಿ ಮತ್ತು ನ್ಯಾಯಕ್ಕಾಗಿ ತಮ್ಮ ಏಕತೆ ಮತ್ತು ಸೌಹಾರ್ದತೆಯನ್ನು ವ್ಯಕ್ತಪಡಿಸಿದರು. ಚರ್ಚಿನ ಭಕ್ತಾಧಿಗಳು, ಕಾನ್ವೆಂಟ್ ಭಗಿನಿಯರು, ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಈ ಮೌನ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತ, ಕ್ರೈಸ್ತ ಸಮುದಾಯದ ಏಕತೆಯ ಬಲವಾದ ಸಂದೇಶವನ್ನು ಸಮಾಜಕ್ಕೆ ನೀಡಿತು.