ಮಂಗಳೂರು, ಡಿ. 16 (DaijiworldNews/AK):ನಗರದ ಹೊರವಲಯದ ತೊಕ್ಕೊಟ್ಟುವಿನ ಕಲ್ಲಾಪು ಸೇವಂತಿಗುತ್ತು ಬಳಿ ನಿರ್ಮಾಣ ಕಾರ್ಯದ ಸಮಯದಲ್ಲಿ ಗುಡ್ಡ ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ.


ಮೃತರನ್ನು ಹುನಗುಂದ ತಾಲೂಕಿನ ನಿವಾಸಿ ಬಾಳಪ್ಪ (45) ಎಂದು ಗುರುತಿಸಲಾಗಿದೆ. ಖಾಸಗಿ ಆಸ್ತಿಯಲ್ಲಿ ಐವರು ಕಾರ್ಮಿಕರು ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಕೆಲಸದ ಸಮಯದಲ್ಲಿ, ದಿಬ್ಬವನ್ನು ಅಗೆಯಲು ಜೆಸಿಬಿ ಬಳಸುತ್ತಿದ್ದಾಗ ಅದು ಇದ್ದಕ್ಕಿದ್ದಂತೆ ಕುಸಿದಿದೆ. ಸ್ಥಳದಲ್ಲಿ ಗಾರೆ ಹಿಡಿದು ಕೆಲಸ ನಿರ್ವಹಿಸುತ್ತಿದ್ದ ಬಾಳಪ್ಪ ದಿಡೀರ್ ಕುಸಿತಗೊಂಡ ಮಣ್ಣಿನಡಿಯಲ್ಲಿ ಹೂತುಹೋದರು. ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.