ಬಂಟ್ವಾಳ, ಸೆ. 16 (DaijiworldNews/AA): ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಳಿಕ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.


ಬಂಧಿತರನ್ನು ವಿಟ್ಲ ಕಸಬಾ ಗ್ರಾಮದ ಮಂಗಳಪದವು ನಿವಾಸಿ ಸನತ್ ಕುಮಾರ್ (23), ಮಹಮ್ಮದ್ ರಾಝಿಕ್ (23), ಚೇತನ್ (23) ಎರ್ಮೆ ಮಜಲು ನಿವಾಸಿ ಧ್ಯಾನ್ ಕರ್ಕೆರ (23) ಎಂದು ಗುರುತಿಸಲಾಗಿದೆ.
ಸೆ.15 ರಂದು ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಂದ ಖಚಿತ ಮಾಹಿತಿಯಂತೆ, ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಎರುಂಬು ರಸ್ತೆ ಎಂಬಲ್ಲಿ, ದ್ವಿಚಕ್ರ ವಾಹನದೊಂದಿಗೆ ಅನುಮಾಸ್ಪದವಾಗಿ ಮತ್ತು ಸಂಶಯಾಸ್ಪದವಾಗಿ ಮೂವರು ನಿಂತುಕೊಂಡಿದ್ದರು. ಈ ವೇಳೆ ಅವರನ್ನು ವಿಚಾರಿಸಿದಾಗ ಅವರು, ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮೋಟಾರ್ ಸೈಕಲಿನಲ್ಲಿ ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.
ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು, ಅವರ ಬಳಿಯಿದ್ದ 6.27 ಗ್ರಾಂ ತೂಕದ ಗಾಂಜಾ, ೩ ಮೊಬೈಲ್, ಒಂದು ಸಣ್ಣ ಚೂರಿ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ತನಿಖೆ ನಡೆಸಲಾಗಿ ಇನ್ನೊಬ್ಬ ಆರೋಪಿಯಾದ ಧ್ಯಾನ್ ಕರ್ಕೆರ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.