ಕಾಸರಗೋಡು, ಆ. 26 (DaijiworldNews/ AK): 2025ರ ಆಗಸ್ಟ್ 26ರಂದು, ಕೋಲ್ಕತ್ತಾದ ಸಂತ ಮದರ್ ತೇರೆಸಾ ಅವರ ಜನ್ಮದಿನ ಮಹೋತ್ಸವದ ಪವಿತ್ರ ಸಂದರ್ಭದಲ್ಲಿ, ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ “ದೀನ–ದಲಿತರಿಗಾಗಿಯೂ ಸಮಾಜದ ಅಲ್ಪಸಮೃದ್ಧರಿಗಾಗಿಯೂ” ಕರುಣೆ, ಪ್ರೀತಿ ಮತ್ತು ಅನುಕಂಪ ಭರಿತ ನಿಸ್ವಾರ್ಥ ಸೇವೆಯ ಹದಿನಾರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂತೋಷವನ್ನು ಭಾವಪೂರ್ಣವಾಗಿ ಹಾಗೂ ಅತ್ಯಂತ ಸಡಗರದಿಂದ ಆಚರಿಸಿತು.








ಧನ್ಯವಾದದ ಪವಿತ್ರ ಬಲಿ ಪೂಜೆಃ
ಕಾರ್ಯಕ್ರಮವು ಧನ್ಯವಾದದ ದಿವ್ಯ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಈ ಪವಿತ್ರ ಅರ್ಪಣೆಯನ್ನು ಮಂಗಳೂರು ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿ ವಂದನೀಯ ಡಾ. ಪ್ರವೀನ್ ಮಾರ್ಟಿಸ್ ಎಸ್.ಜೆ. ಪ್ರಧಾನ ಅರ್ಚಕರಾಗಿ ನೆರವೇರಿಸಿದರು. ಸಹ ಅರ್ಚಕರಾಗಿ ವಂ. ಫಾ. ಪೀಟರ್ ರೆಜಿನಾಲ್ಡ್ ಡಿ’ಸೋಜ, ವಂ. ಫಾ. ಲೀಗೊರಿ ಕ್ರಾಸ್ಟಾ ಓಸಿಡಿ (ನಿರ್ವಹಣಾಧಿಕಾರಿ, ರಿಷಿವನ–ಆಧ್ಯಾತ್ಮಿಕ ಕೇಂದ್ರ, ರಾಣಿಪುರ), ವಂ. ಫಾ. ಸಿರಿಲ್ ಡಿ’ಸೋಜ (ಸ್ನೇಹಾಲಯದ ಚಾಪ್ಲೇನ್), ಹಾಗೂ ವಂ. ಫಾ. ಡೊಮಿನಿಕ್ ಸೆಕ್ವೇರಾ ಎಸ್ಡಿಬಿ (ಹೋಲಿ ಕ್ರಾಸ್ ಚರ್ಚ್, ಪಾವೂರು) ಸಹಭಾಗಿಯಾದರು.
ಈ ಬಲಿದಾನವನ್ನು ಕಳೆದ ಹದಿನಾರು ವರ್ಷಗಳಲ್ಲಿ ಸ್ನೇಹಾಲಯಕ್ಕೆ ತಮ್ಮ ದಾನ, ಪ್ರೀತಿ ಮತ್ತು ಪ್ರೋತ್ಸಾಹವನ್ನು ನೀಡಿದ ಎಲ್ಲಾ ಧಾನಿಗಳು, ಶುಭಚಿಂತಕರು ಹಾಗೂ ಹಿತೈಷಿಗಳಿಗಾಗಿ ಅರ್ಪಿಸಲಾಯಿತು.
ಸಾಹಿತ್ಯ ಕೃತಿಗಳ ಬಿಡುಗಡೆಃ
ಬಲಿಪೂಜೆಯ ನಂತರ, ಶ್ರೀ ಜಿಯೋ ಡಿ. ಸಿಲ್ವಾ ಅಗ್ರಾರ್ ಅವರ ಎರಡು ಸೃಜನಶೀಲ ಕೃತಿಗಳ ಸ್ಮರಣೀಯ ಅನಾವರಣ ನೆರವೇರಿತು.
ಮೊದಲ ಕೃತಿ: “The Chosen One” – ಆಂಗ್ಲ ಭಾಷೆಯಲ್ಲಿ ರಚಿಸಲ್ಪಟ್ಟ ಈ ಕೃತಿಯಲ್ಲಿ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ಟಾ ಅವರ ಅಮೋಘ ಜೀವನಗಾಥೆ, ಸಾಧನೆಗಳು, ಹಾಗೂ ಸಂಸ್ಥೆಯ ನಿರ್ಮಾಣಕ್ಕಾಗಿ ನಡೆಸಿದ ದುರ್ಗಮವಾದ ಹೋರಾಟವನ್ನು ಸಾಹಿತ್ಯಮಯ ಶೈಲಿಯಲ್ಲಿ ಚಿತ್ರಿಸಲಾಗಿದೆ. ದಿ ಚೊಸನ್ ಒನ್" / ಅಂದರೆ “ಆರಿಸಲ್ಪಟ್ಟವನು” ಎನ್ನುವ ಶೀರ್ಷಿಕೆಯಲ್ಲಿ ಲೋಕಾರ್ಪಣೆಯಾಗಲಿರುವ ಈ ಪುಸ್ತಕಕ್ಕೆ ಜೆ. ವಿ. ಡಿ ಮೆಲ್ಲೊ ಇವರು ಸೊಗಸಾದ ಪ್ರಸ್ತಾವನೆಯನ್ನು ಬರೆದಿರುತ್ತಾರೆ.
ಎರಡನೇ ಕೃತಿ: ಕೊಂಕಣಿ ಭಾಷೆಯ “ಪಾಟಿಂ ಯಾ ಮುಕಾರ್ ಮೇಟಾಂ ತುಜಿಂ” – ಸಕಾರಾತ್ಮಕ ಚಿಂತನೆಗಳನ್ನು ಯುವಪೀಳಿಗೆಗೆ ಪ್ರೇರಕವಾಗುವಂತೆ ಲೇಖನರೂಪದಲ್ಲಿ ಸಂಕಲಿಸಿದ ಪುಸ್ತಕವಾಗಿಗೆ. ಈ ಅದ್ವಿತೀಯ ಕೃತಿಗಳು ರೂಪಗೊಂಡಿರುವ ಶ್ರಮದ ಹಿಂದೆ ಪ್ರಭಾವಿ ಲೇಖಕರಾದ ಶ್ರೀ ಜಿಯೋ ಡಿ’ ಸಿಲ್ವ ಅವರ ಅದ್ಭುತ ಸಾಹಿತ್ಯ ಮತ್ತು ಕೌಶಲ್ಯವನ್ನು ಕಾಣಬಹುದಾಗಿದೆ. ಈ ಕೃತಿಗಳನ್ನು ವಂದನೀಯ ಡಾ. ಪ್ರವೇನ್ ಮಾರ್ಟಿಸ್ ಎಸ್.ಜೆ. ಗೌರವಪೂರ್ವಕವಾಗಿ ಅನಾವರಣಗೊಳಿಸಿ ಬಿಡುಗಡೆ ಮಾಡಿದರು.
ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ – ಸೇವೆಯ ಮೆಚ್ಚುಗೆ
ಈ ಸಂದರ್ಭದಲ್ಲಿ, ಕಳೆದ 2024–2025ರಲ್ಲಿ ನೀಡಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ, ಪುರುಷೋತ್ತಮ (ಸ್ನೇಹಾಲಯದ ನಿರ್ವಹಣಾ ಮೇಲ್ವಿಚಾರಕ) ಅವರಿಗೆ “ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ” ಯನ್ನು ನೀಡಿ ಅವರನ್ನು ಗೌರವಿಸಲಾಯಿತು.
ಕೃತಜ್ಞತೆಯ ವಂದನಾ ನುಡಿಗಳು
ಸ್ನೇಹಾಲಯದ ಸಂಸ್ಥಾಪಕರಾದ ಜೋಸೆಫ್ ಕ್ರಾಸ್ಟಾ ತಮ್ಮ ಭಾವಪೂರ್ಣ ಭಾಷಣದ ಸಂದರ್ಭದಲ್ಲಿ, ಸಂಸ್ಥೆಯ ದೀರ್ಘಯಾತ್ರೆಯಲ್ಲಿ ಅಡಿಗಲ್ಲಿನಂತೆ ಬೆಂಬಲಿಸಿದ ಎಲ್ಲಾ ದಾನಿಗಳು, ಹಿತೈಷಿಗಳು ಹಾಗೂ ಸ್ನೇಹಿತರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು. ಅವರೊಂದಿಗೆ ಒಲಿವಿಯಾ ಕ್ರಾಸ್ಟಾ ಅವರು ಅತಿಥಿಗಳಿಗೂ ಸಭಿಕರಿಗೂ ಹೃತ್ಪೂರ್ವಕ ಧನ್ಯವಾದ ವ್ಯಕ್ತಪಡಿಸಿದರು.
ಸಹಭೋಜನ ಸಮಾರೋಪ
ಅನೇಕ ದಾನಿಗಳು, ಹಿತೈಷಿಗಳು ಮತ್ತು ಶುಭಚಿಂತಕರ ಸಾನ್ನಿಧ್ಯದಲ್ಲಿ ಸಮಾರಂಭವು ಭಾವಪೂರ್ಣವಾಗಿ ತೆರೆ ಕಂಡು, ಕೊನೆಗೆ ಸೌಹಾರ್ದಪೂರ್ಣ ಸಹಭೋಜನದೊಂದಿಗೆ ಆಚರಿಸಲಾಯಿತು. ಇದು ಸ್ನೇಹಾಲಯದ ನಿಜವಾದ ಆತ್ಮ ಹಾಗೂ ಬಾಂಧವ್ಯವನ್ನು ಪ್ರತಿಬಿಂಬಿಸಿತು.
ಸಮಾರೋಪದ ವಂದನೆ
ಮಗದೊಮ್ಮೆ, ಸ್ನೇಹಾಲಯವು ತನ್ನ ದಿವ್ಯಪರಂಪರೆಯನ್ನು ಮುಂದುವರಿಸಿಕೊಂಡು ದಾನಿಗಳ ದಯೆಯಿಂದ ಪೋಷಿತವಾಗಿ, ಸಂತ ಮದರ್ ತೇರೆಸಾ ಅವರ ಶಾಶ್ವತ ಸ್ಫೂರ್ತಿಮಾರ್ಗದರ್ಶನದಲ್ಲಿ, “ಮಾನವಸೇವೆಯ ನಿರಂತರ ಪಯಣ”ವನ್ನು ವಿಶ್ವಾಸದ ದೀಪಶಿಖೆಯಿಂದ ಪ್ರಜ್ವಲಿಸುತ್ತಾ ಸಾಗುವುದಾಗಿ ನಿಶ್ಚಯ ವ್ಯಕ್ತಪಡಿಸಿತು.