ಉಡುಪಿ, ಜು. 15(DaijiworldNews/TA): ಮೀನುಗಾರಿಕೆಗೆಂದು ನಾಡದೋಣಿಯೊಂದಿಗೆ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಅಲೆಗಳ ರಭಸಕ್ಕೆ ನೀರುಪಾಲಾದ ದಾರುಣ ಘಟನೆ ಉಡುಪಿಯ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿ ನಿವಾಸಿ ಸುರೇಶ್ ಖಾರ್ವಿ (48), ಗಂಗೊಳ್ಳಿ ಬೇಲಿಕೆರಿ ನಿವಾಸಿ ಲೋಹಿತ್ ಖಾರ್ವಿ (35), ಮಲ್ಯಾರುಬೆಟ್ಟು ನಿವಾಸಿ ಜಗದೀಶ್ ಖಾರ್ವಿ (50) ನೀರುಪಾಲಾದ ಮೀನುಗಾರರು.





ಮುಂಜಾನೆ ಸಿಪಾಯಿ ಸುರೇಶ್ ಮಾಲೀಕತ್ವದ ನಾಡದೋಣಿಯಲ್ಲಿ ನಾಲ್ವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕಡಲು ಪ್ರಕ್ಷುಬ್ದಗೊಂಡ ಹಿನ್ನೆಲೆಯಲ್ಲಿ ಅಪಾಯದ ಮುನ್ಸೂಚನೆಯನ್ನರಿತ ಮೀನುಗಾರರು ದಡಕ್ಕೆ ವಾಪಾಸಾಗಲು ಪ್ರಯತ್ನಿಸುತ್ತಿದ್ದ ವೇಳೆಯೇ ನಾಡದೋಣಿ ಮಗುಚಿದೆ ಎನ್ನಲಾಗಿದೆ. ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ಆಯತಪ್ಪಿ ನೀರಿಗೆ ಬಿದ್ದಿದ್ದು, ಓರ್ವ ಮೀನುಗಾರ ಸಂತೋಷ ಎನ್ನುವವರು ಈಜಿ ಬೇರೆ ದೋಣಿ ತಲುಪಿ ಅಪಾಯದಿಂದ ಪಾರಾಗಿದ್ದಾರೆ. ನೀರುಪಾಲಾದ ಮೂವರು ಮೀನುಗಾರರಿಗಾಗಿ ಸಮುದ್ರದಲ್ಲಿ ಹುಡುಕಾಟ ಆರಂಭಿಸಲಾಗಿದೆ.