ಉಡುಪಿ, ಜು. 08 (DaijiworldNews/TA): ಬ್ರಹ್ಮಾವರದ ನಾಲ್ಕೂರಿನಲ್ಲಿ ಕಳೆದ ಎರಡು ವರ್ಷದಿಂದ ಕೊಠಡಿಯಲ್ಲಿ ಗೃಹಬಂಧನದಲ್ಲಿದ್ದ ಮನೋರೋಗಿ ಮಹಿಳೆಯನ್ನು ಖಚಿತ ಮಾಹಿತಿಯ ಆಧಾರದ ಮೇಲೆ ವಿಶು ಶೆಟ್ಟಿ ಅಂಬಲಪಾಡಿ ಅವರು ಸಖೀ ಸೆಂಟರಿನ ಸಿಬ್ಬಂದಿ ಹಾಗೂ ಪೊಲೀಸ್ ಸಹಾಯದಿಂದ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ಬೇಬಿ (38) ಗೃಹ ಬಂಧನದಿಂದ ರಕ್ಷಿಸಲ್ಪಟ್ಟವರು. ಇವರು ವಿವಾಹಿತರಾಗಿದ್ದು ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಸ್ಥಳಕ್ಕೆ ವಿಶು ಶೆಟ್ಟಿ ತೆರಳಿದಾಗ ಕಿಟಕಿಯಲ್ಲಿ ಮಹಿಳೆ ತನ್ನನ್ನು ರಕ್ಷಿಸಿ ಬದುಕಲು ಆಗುತ್ತಿಲ್ಲ ಹಿಂಸೆಯಿಂದ ಕಂಗಾಲಾಗಿದ್ದೇನೆ. ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ನನ್ನನ್ನು ಪಾರು ಮಾಡಿ ಎಂದು ಅಂಗಲಾಚಿ ಬೊಬ್ಬಿಡುತ್ತಿದ್ದರು. ಮನೆಯವರು ಭದ್ರವಾಗಿ ಬಾಗಿಲು ಹಾಗೂ ಬೀಗ ಹಾಕಿದ್ದು, ಸಣ್ಣ ಕಿಟಕಿಯಿಂದ ಆಹಾರ ನೀಡುತ್ತಿದ್ದರು ಎನ್ನಲಾಗಿದೆ.