ಉಡುಪಿ, ಜೂ. 12 (DaijiworldNews/AA): ಒಂದೇ ತರಗತಿಯ ಇಬ್ಬರು ಬಾಲಕಿಯರು ಜಪಾನ್ನಲ್ಲಿ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವುದು ಮಹಿಳಾ ಸಬಲೀಕರಣಕ್ಕೆ ಗಮನಾರ್ಹ ಸ್ಫೂರ್ತಿಯಾಗಿದ್ದು, ಸಮಾನತೆಯ ಕಡೆಗೆ ಪ್ರಗತಿಯ ಸಂಕೇತವಾಗಿದೆ. ಮಕ್ಕಳ ಈ ಸಾಧನೆಯು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಸಾಧನೆಗಳನ್ನು ಸಹ ಪ್ರತಿಬಿಂಬಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲದ ರಜತಾದ್ರಿಯ ಕಚೇರಿಯಲ್ಲಿ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಆಯೋಜಿಸಿದ್ದ INSPIRE ಪ್ರಶಸ್ತಿಗಳ ಸ್ಪರ್ಧೆಯ ರಾಷ್ಟ್ರಮಟ್ಟದ ವಿಜೇತರಾಗಿ ಹೊರಹೊಮ್ಮಿದ ಕಾರ್ಕಳ ತಾಲೂಕಿನ ಕುಕ್ಕುಜೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಾದ ಅಮೂಲ್ಯ ಮತ್ತು ನಿಕಿತಾ ಅವರನ್ನು ಸನ್ಮಾನಿಸಿ ಮಾತನಾಡಿದರು. ಜೂನ್ 15 ರಿಂದ 21 ರವರೆಗೆ ಜಪಾನ್ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲು ಅಮೂಲ್ಯ ಮತ್ತು ನಿಕಿತಾ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನ ಶಿಕ್ಷಕ ಸುರೇಶ್ ಮಾರ್ಕಳ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಲಾದ "ಫ್ಲಡ್ ಡಿಟೆಕ್ಟರ್ ಪೋಲ್" ಮತ್ತು "ರೋಪೋ ಮೀಟರ್" ಎಂಬ ಆವಿಷ್ಕಾರಕ್ಕಾಗಿ INSPIRE ಪ್ರಶಸ್ತಿಗಳ ರಾಷ್ಟ್ರಮಟ್ಟದ ವಿಜೇತರಾಗಿ ಘೋಷಿಸಲಾಗಿದೆ. ಒಂದೇ ತರಗತಿಯ ಇಬ್ಬರು ಬಾಲಕಿಯರು ಜಪಾನ್ನಲ್ಲಿ ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನಕ್ಕೆ ಆಯ್ಕೆಯಾದ ದೇಶದ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಕುಕ್ಕುಜೆ ಪ್ರೌಢಶಾಲೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಅಶೋಕ್ ಕಾಮತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗರಾಜ್ ಕೆ, ಶಿಕ್ಷಕ ಸುರೇಶ್ ಮಾರ್ಕಳ, ಮತ್ತು ಅಮೂಲ್ಯ ಮತ್ತು ನಿಕಿತಾ ಅವರ ಪೋಷಕರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸುವ ಒಟ್ಟು 54 ವಿದ್ಯಾರ್ಥಿಗಳಲ್ಲಿ, ಈ ಇಬ್ಬರು ಬಾಲಕಿಯರು ಜಪಾನ್ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.