ಮಂಗಳೂರು, ಜೂ. 11 (DaijiworldNews/AA): ಮಂಗಳೂರಿನ ಲ್ಯಾಂಡ್ ಲಿಂಕ್ಸ್ನ ನಿವಾಸಿ ಹಾಗೂ ನಿವೃತ್ತ ಟೆಲಿಕಾಂ ಉದ್ಯೋಗಿ ಸತೀಶ್ ರಾವ್ ಮತ್ತು ವೀಣಾ ದಂಪತಿಯ ಪುತ್ರಿ ಅನನ್ಯಾ ರಾವ್ ಅವರು ಭಾರತೀಯ ನೌಕಾ ಪಡೆಯ ಸಬ್ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.

ಅನನ್ಯಾ ಅವರು ಮೇ 31ರಂದು ಇಂಡಿಯನ್ ನೇವಲ್ ಅಕಾಡೆಮಿ ಎಝಿಮಾಲದಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್ನಲ್ಲಿ ಕಮೀಷನ್ಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದವರೆಗೆ ಮಂಗಳೂರಿನಲ್ಲಿ ಪೂರೈಸಿದ್ದು, ನಂತರ ಸುರತ್ಕಲ್ನ ಎನ್ಐಟಿಕೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.
ಅನನ್ಯಾ ಅವರಿಗೆ ಬಾಲ್ಯದಿಂದಲೂ ಭಾರತೀಯ ಸೇನೆ ಸೇರಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಕಾಲೇಜು ದಿನಗಳಲ್ಲಿ ಎನ್ಸಿಸಿ ತರಬೇತಿ ಪಡೆದಿದ್ದರು. ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ನಂತರ ಸೇನಾ ನೇಮಕಾತಿ ಪರೀಕ್ಷೆಯ ಮೂಲಕ ಆಯ್ಕೆಗೊಂಡು 10 ತಿಂಗಳ ತರಬೇತಿ ಪಡೆದು ಇತ್ತೀಚೆಗೆ ಸಬ್ಲೆಫ್ಟಿನೆಂಟ್ ಆಗಿ ಆಯ್ಕೆಗೊಂಡಿದ್ದಾರೆ.
ಅನನ್ಯಾ ಅವರ ತಂದೆ ಸತೀಶ್ ರಾವ್ ಅವರು ಅಂಗವಿಕಲರ ಸಶಕ್ತಿಕರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ರಾಷ್ಟ್ರೀಯ ಸಂಘಟನೆ ಸಕ್ಷಮದ ಜಿಲ್ಲಾ ಖಜಾಂಜಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.