ಸುಳ್ಯ, ಜೂ. 08 (DaijiworldNews/TA): ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಡಿಸಿಕೊಂಡು ವ್ಯಕ್ತಿತ್ವ ವಿಕಾಸನ ಮಾಡಿಕೊಳ್ಳಬೇಕು ಎಂದು ಬಿ.ಇ.ಒ ಕೃಷ್ಣಪ್ಪ ಹೇಳಿದರು. ಅವರು ಸುಳ್ಯದ ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಚೈತನ್ಯ ಸೇವಾಶ್ರಮದ ವತಿಯಿಂದ ಉಚಿತ ಲೇಖನ ಸಾಮಾಗ್ರಿ ವಿತರಣೆ ಹಾಗೂ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 222ನೇ ಕೃತಿ ‘ಸತ್ಸಂಗದಿಂದ ಸಜ್ಜನನಾಗುವೆ’ ಬಿಡುಗಡೆಗೊಳಿಸಿ ಮಾತನಾಡಿದರು.

ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ ಪುಸ್ತಕ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿ ವಿತರಿಸಿ ಮಾತನಾಡಿದರು. ಸ್ವಾಮೀಜಿಯವರು ಪುಸ್ತಕ ಬರೆದು ಉಚಿತವಾಗಿ ವಿತರಿಸುತ್ತಿರುವುದು ಶ್ರೇಷ್ಠ ಕಾರ್ಯ. ಈ ಪುಸ್ತಕವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಅಜ್ಜಾವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಿನಾಥ ಅವರು ಮಾತನಾಡಿ, ಸ್ವಾಮೀಜಿಯವರ ಸಮಾಜ ಸೇವೆ ಮೆಚ್ಚುವಂತದ್ದಾಗಿದೆ. ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಡಾ.ಸಾಯಿಗೀತಾ , ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಶಂಕರ್ ಪೆರಾಜೆ ಮಾತನಾಡಿದರು. ಆಶ್ರಮದ ಟ್ರಸ್ಟಿ ಪ್ರಣವಿ, ವಿವಿಧ ಶಾಲಾ ಶಿಕ್ಷಕಿಯರು ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.