ಉಡುಪಿ, ಜೂ. 07 (DaijiworldNews/TA): ಬಹರೈನ್ ಅನಿವಾಸಿ ಕನ್ನಡಿಗರ ವೇದಿಕೆಯ ನಿಯೋಗ ಇಂದು ಅಧ್ಯಕ್ಷರಾದ ಶ್ರೀ ರಾಜ್ ಕುಮಾರ್ ರವರ ನೇತೃತ್ವದಲ್ಲಿ ಉಡುಪಿಯ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಐಎಎಸ್ ಅವರನ್ನು ಭೇಟಿಯಾಗಿ ಬಹರೈನ್ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚಿಸಿತು. ಸಮಸ್ಯೆಗಳ ವಿವರಗಳನ್ನೊಳಗೊಂಡ ಮನವಿಯನ್ನೂ ಸಲ್ಲಿಸಿತು.




ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ತೊಡಕುಗಳು, ಬಹರೈನ್ ನಲ್ಲಿ ಕೆಲಸ ಕಳಕೊಳ್ಳುವ ಕನ್ನಡಿಗರಿಗೆ ಸರಕಾರದ ಸಹಾಯ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ವಿಭಾಗದಲ್ಲಿ ಬಹರೈನ್ ನಿವಾಸಿಗಳು ಎದುರಿಸುತ್ತಿರುವ ತೊಂದರೆಗಳು, ಹಬ್ಬ ಹಾಗೂ ರಜಾ ಸಮಯದಲ್ಲಿನ ವಿಮಾನ ಪ್ರಯಾಣದ ವಿಪರೀತ ದರಗಳು ಮುಂತಾದ ವಿಚಾರಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಜಿಲ್ಲಾಧಿಕಾರಿ ಸುಮಾರು ಮೂವತ್ತು ನಿಮಿಷಗಳ ಕಾಲ ನಿಯೋಗದೊಂದಿಗೆ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ತನ್ನಿಂದಾದ ಸಹಾಯವನ್ನು ನೀಡುವ ಬಗ್ಗೆ ಭರವಸೆ ಇತ್ತರು. ನಿಯೋಗದಲ್ಲಿ ,ಉಡುಪಿ ಜಿಲ್ಲಾ ಗ್ಯಾರಂಟೀ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು, ಬಹರೈನ್ ಕನ್ನಡಿಗರಾದ ಆಸ್ಟಿನ್ ಸಂತೋಷ್, ರಾಜೇಶ್ ಬಿ. ಶೆಟ್ಟಿ, ಸಂಜೀವ ಶೆಟ್ಟಿ ಹಾಗೂ ಉದಯ ಕುಮಾರ್ ಶೆಟ್ಟಿ ಯವರು ಇದ್ದರು.