ಮಂಗಳೂರು, ಏ.30(DaijiworldNews/TA): ನೇತ್ರಾವತಿ ನದಿಗೆ ಕಲುಷಿತ ನೀರು ಸೇರುವ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ಈ ಕುರಿತು ಬಿತ್ತರವಾದ ವರದಿಗಳನ್ನು ಗಮನಿಸಿ, ಮಂಗಳೂರಿನ ಜಾಗೃತ ಹಿರಿಯ ನಾಗರಿಕರ ತಂಡವೊಂದು ಬಂಟ್ವಾಳದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿತು. ಪ್ರತ್ಯಕ್ಷ ಭೇಟಿ ಸಂದರ್ಭ ನದಿಯ ಒಡಳಿಗೆ ತ್ಯಾಜ್ಯ ಸೇರುವುದನ್ನು ಗಮನಿಸಿದ ತಂಡ, ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಮನವಿಯಲ್ಲಿ ಏನು ಹೇಳಿದೆ? : ಮಂಗಳೂರಿಗರು ಕುಡಿಯುವ ತುಂಬೆ ನೀರಿಗೆ ಕೊಳಚೆ ನೀರು ಸೇರುತ್ತಿದೆ ಎಂದು ತಿಳಿದು ಬರುತ್ತದೆ ಬಂಟ್ವಾಳದ ಬಡ್ಡೆಕಟ್ಟೆ ಕೆಳಗಿನಪೇಟೆ, ಕಂಚಿ ಗಾರಪೇಟೆ, ಗೂಡಿನ ಬಳ್ಳಿ ಕೈಕುಂಜೆ ಪಾಣೆಮಂಗಳೂರು ಬರಲಿಯ ತಲಪಾಡಿ ಮುಂತಾದ ಸುಮಾರು 20ಕ್ಕೂ ಅಧಿಕ ಕಡೆಗಳಲ್ಲಿ ಮೋರಿ ಮತ್ತು ಕಾಲುವೆಗಳ ಮೂಲಕ ಕುಡಿಯುವ ನೀರಿಗೆ ಕೊಳಚೆ ನೀರು ಸೇರುತಿದೆ ಜೊತೆಗೆ ವಸತಿ ಸಮುಚ್ಛಯಗಳ ಶೌಚಾಲಯಗಳ ನೀರು ಹೋಟೆಲ್ ತ್ಯಾಜ್ಯಗಳು ಕೋಳಿ ಸಹಿತ ಮಾಂಸದ ಅಂಗಡಿಗಳ ಕೊಳಚೆ ನೀರು ನದಿ ಸೇರುತಿದೆ ಎಂದು ಪತ್ರಿಕೆಗಳ ಮೂಲಕ ತಿಳಿದ ನಾವೆಲ್ಲರೂ ಬಹಳ ಆತಂಕಕ್ಕೆ ಒಳಗಾಗಿದ್ದೆವು.
ಇದನ್ನು ಪ್ರತ್ಯಕ್ಷವಾಗಿ ಪರಾಂಬರಿಸಿ ನೋಡಲು ನಾವು ಕೆಲವರು ಬಂಟ್ವಾಳದ ಎರಡು ಮೂರು ಕಡೆಗಳಲ್ಲಿ ಹೋಗಿ ನೋಡಲು ಕೊಳಚೆ ನೀರು ನೇತ್ರಾವತಿ ನದಿ ಸೇರುವುದನ್ನು ಕಂಡಿರುತ್ತೇವೆ ಇದು ನಿಜವಾಗಿಯೂ ಬಹಳ ಆತಂಕಕಾರಿ ಸಂಗತಿ ಮಂಗಳೂರು ನಗರ ಬೆಳೆಯುತ್ತಿದ್ದು ಸುಮಾರು ಎಂಟು ಲಕ್ಷ ನಾಗರಿಕರಿದ್ದು ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಜನರ ಆರೋಗ್ಯದಲ್ಲಿ ನೇರ ಪರಿಣಾಮವಾಗಬಹುದು ನೇತ್ರಾವತಿ ನೀರಿಗೆ ಕೊಳಚೆ ನೀರು ಸೇರುವುದರಿಂದ ಬಹುಶ ನದಿ ನೀರನ್ನು ಎರಡೆರಡು ಸಲ ಶುದ್ಧೀಕರಿಸಬಹುದು ಆದರೆ ಕೊಳೆಕೆ ನೀರು ನೇತ್ರಾವತಿ ನದಿಯ ಮಡಿಲು ಸೇರುವುದರಿಂದ ನಾಗರಿಕರಿಗೆ ತಾವು ಕುಡಿಯುವ ನೀರು ಕೊಳಚೆ ನೀರು ಎಂದು ಮನಪಟಲದಲ್ಲಿ ನಿಲ್ಲುತ್ತದೆ. ಈಗಾಗಲೇ ಸಾಕಷ್ಟು ಚರ್ಚೆಗಳು ಈ ಕುರಿತು ನಡೆದಿದ್ದು, ಕೊಳಚೆ ನೀರು ತ್ಯಾಜ್ಯ ಸೇರುವುದನ್ನು ಇನ್ನು ನಿಂತಿಲ್ಲ. ಜನರ ಹಿತ ದೃಷ್ಟಿಯಿಂದ ಮತ್ತು ಉತ್ತಮ ಆರೋಗ್ಯದ ದೃಷ್ಟಿಯಿಂದ ಜನನಾಯಕರು ಮತ್ತು ಹಿರಿಯ ಅಧಿಕಾರಿಗಳು ಸೇರಿ ಬಂಟ್ವಾಳ ಮತ್ತು ಆಸುಪಾಸಿನಲ್ಲಿ ನದಿ ಸೇರುವಂತಹ ಕೊಳಚೆ ನೀರು ಮತ್ತು ತ್ಯಾಜ್ಯವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಪರಿಹಾರವೇನು? : ಈ ಕುರಿತು ಪರಿಹಾರವನ್ನೂ ಅವರ ತಂಡ ಸೂಚಿಸಿದ್ದು, ಬಂಟ್ವಾಳ ಮತ್ತು ಆಸುಪಾಸಿನ ಪ್ರದೇಶಗಳನ್ನು ಸಂಪೂರ್ಣವಾಗಿ ಒಳಚರಂಡಿ ವ್ಯವಸ್ಥೆಗೆ ಒಳಪಡಿಸುವುದು ಅಥವಾ ದೊಡ್ಡ ದೊಡ್ಡ ಇಂಗು ಗುಂಡಿಗಳನ್ನು ಮಾಡಿ ಕೊಳಚೆ ನೀರು ಮತ್ತು ತ್ಯಾಜ್ಯಗಳನ್ನು ಅದಕ್ಕೆ ಬಿಡುವುದು ಜೊತೆಗೆ ನೇತ್ರಾವತಿ ನದಿ ನೀರು ಕಲುಷಿತವಾಗದಂತೆ ನೋಡುವುದು ಎಂದಿದ್ದಾರೆ.