ಉಪ್ಪಿನಂಗಡಿ, ಏ.24 (DaijiworldNews/AA): ಎರಡು ಮನೆಗಳಿಗೆ ನುಗ್ಗಿದ ಕಳ್ಳ ಲಕ್ಷಾಂತರ ರೂ. ಬೆಲೆಬಾಳುವ ನಗ ನಗದನ್ನು ಕದ್ದೊಯ್ದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ಏ. 22 ರ ರಾತ್ರಿ ನಡೆದಿದೆ.

ತೆಕ್ಕಾರು ಗ್ರಾಮದ ಗುತ್ತುಮನೆ ಮುಸ್ತಾಫ ಅವರ ಮನೆಯಲ್ಲಿ ಪತ್ನಿ ಮತ್ತು ನಾದಿನಿ ಮನೆಯೊಳಗೆ ಮಲಗಿದ್ದರು. ಈ ವೇಳೆ ಮನೆಯೊಳಗೆ ನುಗ್ಗಿದ ಕಳ್ಳ ಒಟ್ಟು 12 ಗ್ರಾಂ ತೂಕವಿರುವ 3 ಉಂಗುರ, ಹಾಗೂ 6 ಗ್ರಾಂ ತೂಕವಿರುವ 4 ಉಂಗುರ ಮತ್ತು 3 ಸಾವಿರ ನಗದು ಹಣ ಕದ್ದೊಯ್ದಿದ್ದಾನೆ.
ಇದೇ ಗ್ರಾಮದ ಕೋಡಿ ಮನೆ ನಿವಾಸಿ ಅನ್ವರ್ ಅವರ ಮನೆಗೂ ನುಗ್ಗಿದ ಕಳ್ಳ, ಮನೆ ಮಂದಿ ಮಲಗಿದ್ದಾಗಲೇ ಮನೆಯೊಳಗಿನ ಕಪಾಟನ್ನು ಜಾಲಾಡಿ, ಅದರಲ್ಲಿದ್ದ ನಗದು ಹಣವನ್ನು ತನ್ನ ಜೇಬಿಗೆ ತುಂಬಿಸಿಕೊಳ್ಳುವ ಭರದಲ್ಲಿ ಅಲ್ಲೇ ಕೆಳಕ್ಕೆ ಬೀಳಿಸಿದ್ದಾನೆ ಎನ್ನಲಾಗಿದೆ. ಆ ವೇಳೆ ಮನೆ ಯಜಮಾನಿ ಎಚ್ಚರಗೊಂಡಿದ್ದು, ಕಳ್ಳ ಓಡಿ ತಪ್ಪಿಸಿಕೊಂಡಿದ್ದಾನೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ತನಿಖೆ ನಡೆಸುತ್ತಿದ್ದಾರೆ.