ಬೆಳ್ತಂಗಡಿ, ಏ.21 (DaijiworldNews/AA): ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಅನುಕೂಲಕ್ಕಾಗಿ ನೂತನ ಕಲ್ಯಾಣ ಮಂಟಪಗಳಾದ ಶ್ರೀ ಉಮಾಮಹೇಶ್ವರ, ಶ್ರೀ ಶಿವ ಪಾರ್ವತಿ, ಶ್ರೀ ಗೌರೀಶಂಕರ ಸಮುಚ್ಚಯವನ್ನು ಏ.20ರಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಿದರು.


ಈ ವೇಳೆ ಅಮೃತವರ್ಷಿಣಿ ಸಭಾಭವನದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ದೇಶದಲ್ಲಿ ಧಾರ್ಮಿಕ ಕೊಡುಗೆಯಾಗಿ ಧರ್ಮಸ್ಥಳ ಮೂಡಿಬಂದಿದೆ. ಟೀಕೆಗಳು ಸಾಯುತ್ತವೆ, ಆದರೆ ನಾವು ಮಾಡಿದ ಕೆಲಸಗಳು ಅಚ್ಚಳಿಯದೆ ಉಳಿಯುತ್ತವೆ. ಧರ್ಮಾಧಿಕಾರಿಗಳ ಪರಿಶುದ್ಧವಾದ ಸೇವೆಗೆ ನನ್ನಂಥ ಸಾವಿರಾರು ಮಂದಿ ಡಿ.ಕೆ.ಶಿವಕುಮಾರ್ ಅವರ ಬೆಂಬಲವಿದೆ ಎಂದು ಹೇಳಿದರು.
ಧರ್ಮಾಧಿಕಾರಿಯಾಗಿ ಡಾ| ಹೆಗ್ಗಡೆಯವರು ಅತಿ ಕಿರಿಯ ವಯಸ್ಸಿನಲ್ಲೇ ಧರ್ಮವನ್ನು ಉಳಿಸುವ ಜತೆಗೆ ಶಿಕ್ಷಣ, ಧಾರ್ಮಿಕ ಕೇಂದ್ರ, ಆರೋಗ್ಯ ಸಹಿತ ಬಹುಮುಖೀ ಸೇವೆ ದೇಶಕ್ಕೆ ಮಾದರಿ. ನಿಮ್ಮ ಪವಿತ್ರ ಸೇವಾ ಕಲ್ಯಾಣವನ್ನು ಮುಂದುವರಿಸಿ. ಧರ್ಮಸ್ಥಳ ಕ್ಷೇತ್ರದಲ್ಲಿ ಮೂರು ಕಲ್ಯಾಣ ಮಂಟಪ ಉದ್ಘಾಟಿಸುವ ಭಾಗ್ಯ ನನಗೆ ದೊರೆತಿರುವುದು ಧನ್ಯತೆಯ ಭಾವ ಮೂಡಿಸಿದೆ. ಜೀವನದಲ್ಲಿ ನಂಬಿಕೆ ಎಂಬುದು ದೊಡ್ಡ ಸಂಬಂಧವಾಗಿದೆ. ಧರ್ಮ ಯಾವುದಾದರು ತತ್ವ ಒಂದೇ. ಹೆಗ್ಗಡೆಯವರ ಜತೆಗೆ ಸದಾ ನಾವಿದ್ದೇವೆ. ತಮ್ಮ ಹಾಗೂ ಕ್ಷೇತ್ರ ರಕ್ಷಣೆಗೆ ನಾವೆಲ್ಲ ಸಿದ್ಧರು, ಬದ್ಧರು ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹೆಗ್ಗಡೆಯವರು ಕ್ಷೇತ್ರದ ವತಿಯಿಂದ ಗೌರವಿಸಿದರು. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಉಪಸ್ಥಿತರಿದ್ದರು.