ಕುಂದಾಪುರ, ಏ.11 (DaijiworldNews/AA): ಬೈಕೊಂದು ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಪೆಟ್ರೋಲ್ ಬಂಕ್ ಸಮೀಪದ ಬೊಬ್ಬರ್ಯ ಕಟ್ಟೆ ಬಳಿ ಗುರುವಾರ ರಾತ್ರಿ ನಡೆದಿದೆ.

ಮೃತ ವ್ಯಕ್ತಿ ಕೋಟ ಕಾರ್ತಟ್ಟು ಚಂದ್ರಶೇಖರ ಶೆಟ್ಟಿ(62) ಎಂದು ಗುರುತಿಸಲಾಗಿದೆ.
ಸಾಲಿಗ್ರಾಮದಿಂದ ತೆಕ್ಕಟ್ಟೆ ಕಡೆಗೆ ಹೋಗುತ್ತಿದ್ದ ಬೈಕೊಂದು ಸವಾರನ ನಿಯಂತ್ರಣ ತಪ್ಪಿ ಕೋಟ ಪೆಟ್ರೋಲ್ ಬಂಕ್ ಸಮೀಪ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಂದ್ರಶೇಖರ್ ಶೆಟ್ಟಿಗೆ ನೇರ ಡಿಕ್ಕಿ ಹೊಡೆದಿದೆ. ಬೈಕ್ ಡಿಕ್ಕಿ ಹೊಡೆದ ಪರಿಣಾಮ ಚಂದ್ರಶೇಖರ ಶೆಟ್ಟಿ ಗಂಭೀರ ಗಾಯಗೊಂಡಿರುತ್ತಾರೆ. ಅಲ್ಲದೆ ಬೈಕ್ ಸವಾರರಾದ ಸಾಲಿಗ್ರಾಮದ ಪೃಥ್ವಿಶ್ ದೇವಾಡಿಗ, ಶಶಾಂಕ್ ದೇವಾಡಿಗ ಇವರು ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ತಕ್ಷಣ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ಆ್ಯಂಬುಲೆನ್ಸ್ ಚಾಲಕ ಕಿಶೋರ್ ಶೆಟ್ಟಿ ಅವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸ್ಪಂದಿಸದೆ ಚಂದ್ರಶೇಖರ ಶೆಟ್ಟಿ ಮೃತಪಟ್ಟಿದ್ದಾರೆ. ಕೋಟ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.