ಮಂಗಳೂರು,ಏ.09 (DaijiworldNews/AK): ಬಿಜೆಪಿ ಜನಪರವಾದ ಕೆಲಸಗಳಲ್ಲಿ ಹಾಗೂ ಜನಪರ ಹೋರಾಟದಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ತಿಳಿಸಿದ್ದಾರೆ.

ಇಂದು ಇಲ್ಲಿ ಜನಾಕ್ರೋಶ ಯಾತ್ರೆಯ ಸಭೆಯಲ್ಲಿ ಅವರು ಮಾತನಾಡಿದರು. ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದೆ ಎಂದು ಅವರು ಟೀಕಿಸಿದರು. ಈ ದುರಾಡಳಿತದ ವಿರುದ್ಧ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅವರ ತಂಡವು ನಿರಂತರ ಹೋರಾಟ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು.
ಸಿದ್ದರಾಮಯ್ಯ, ಡಿಕೆಶಿಯ ಸರಕಾರ ರಾಜ್ಯದ ಇತಿಹಾಸದ ಅತ್ಯಂತ ಭ್ರಷ್ಟ ಸರಕಾರ ಎಂದು ಅವರು ಟೀಕಿಸಿದರು. ನಮ್ಮ ಶಾಸಕರು ಅಧಿವೇಶನದಲ್ಲಿ ನಿರಂತರವಾಗಿ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಆದರೆ, ಸಿದ್ದರಾಮಯ್ಯನವರಿಗೆ, ಸಚಿವರಿಗೆ ಎಚ್ಚರವೇ ಆಗಿಲ್ಲ ಎಂದು ಟೀಕಿಸಿದರು.
ವಿದ್ಯುತ್ ಸ್ವಿಚ್ ಹಾಕಿದರೆ ಅಲ್ಲಿ ಬೆಲೆ ಏರಿಕೆ. ಅರ್ಧ ಗ್ಲಾಸ್ ಕಾಫಿ ಕುಡಿಯಬೇಕೆಂದರೆ ಹಾಲಿನ ಬೆಲೆ ಏರಿಕೆ. ಮಕ್ಕಳನ್ನು ಸ್ಕೂಲಿಗೆ ಕಳಿಸಬೇಕೆಂದರೆ ಪೆಟ್ರೋಲ್ ದರ ಏರಿಕೆ. ಸ್ಟಾಂಪ್ ಡ್ಯೂಟಿ ಸೇರಿ 48 ಅವಶ್ಯಕ ವಸ್ತುಗಳ ದರ ಏರಿಸಿದ್ದಾರೆ ಎಂದು ಆಕ್ಷೇಪಿಸಿದರು.