ರಿಯಾದ್,ಸೆ.19 (DaijiworldNews/AK): ಮಾದಕವಸ್ತು ಕಳ್ಳಸಾಗಣಿಕೆ ಕೇಸ್ಲ್ಲಿ ಸಿಕ್ಕಿಬಿದ್ದಿದ್ದ ಪಂಜಾಬ್ ಮೂಲದ ಟ್ರಕ್ ಚಾಲಕನಿಗೆ ಸೌದಿ ಅರೇಬಿಯಾದಲ್ಲಿ ಮರಣದಂಡನೆ ವಿಧಿಸಿ ಕೋರ್ಟ್ ಆದೇಶಿಸಿದೆ. ಆತನ ಬಿಡುಗಡೆಗೆ ನೆರವಾಗುವಂತೆ ಕುಟುಂಬಸ್ಥರು ಪಂಜಾಬ್ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪಠಾನ್ಕೋಟ್ ಜಿಲ್ಲೆಯ ಸುಜನ್ಪುರದ ನಿವಾಸಿ ಬಲ್ಜಿಂದರ್ ಸಿಂಗ್ ಮರಣದಂಡನೆ ಶಿಕ್ಷೆಗೆ ಗುರಿಯಾದ ಟ್ರಕ್ ಚಾಲಕ. ಮೂರು ವರ್ಷಗಳ ಹಿಂದೆ ದುಬೈ – ಸೌದಿ ಅರೇಬಿಯಾ ಗಡಿಯ ಮೂಲಕ ಸಾಗುವಾಗ ವಾಹನ ತಪಾಸಣೆ ವೇಳೆ, ಟ್ರಕ್ನಲ್ಲಿದ್ದ ಔಷಧದ ಪ್ಯಾಕೆಟ್ನಲ್ಲಿ ಮಾದಕವಸ್ತುಗಳು ಪತ್ತೆಯಾಗಿದ್ದವು. ಬಳಿಕ ಆತನನ್ನು ಬಂಧಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಅಲ್ಲಿನ ನ್ಯಾಯಾಲಯ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಲ್ಜಿಂದರ್ ತಪ್ಪಿತಸ್ಥನೆಂದು ಘೋಷಿಸಿ ಮರಣದಂಡನೆ ವಿಧಿಸಿದೆ.
ಬಲ್ಜಿಂದರ್ ದುಬೈನಲ್ಲಿ ಸುಮಾರು 10 ವರ್ಷಗಳ ಕಾಲ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದ. ಆಗಾಗ ಸೌದಿ ಅರೇಬಿಯಾಗೆ ಸರಕುಗಳನ್ನು ಸಾಗಿಸುತ್ತಿದ್ದ. ಹೀಗೆ ಒಂದು ದಿನ ದುಬೈನಲ್ಲಿ ಆತನೊಂದಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ಸೌದಿ ಅರೇಬಿಯಾದಲ್ಲಿರುವ ವಯಸ್ಸಾದ ರೋಗಿಯೊಬ್ಬನಿಗೆ ಔಷಧದ ಪ್ಯಾಕೆಟ್ ಒಂದನ್ನು ಕೊಂಡೊಯ್ಯುವಂತೆ ಮನವಿ ಮಾಡಿದ್ದ. ಆ ಪ್ಯಾಕೆಟ್ನಲ್ಲಿ ಏನಿದೆ ಎಂದು ತಿಳಿಯದೆಯೇ ಬಲ್ಜಿಂದರ್ ಅದಕ್ಕೆ ಒಪ್ಪಿಕೊಂಡಿದ್ದ. ಗಡಿಯಲ್ಲಿ ಟ್ರಕ್ ತಪಾಸಣೆ ನಡೆಸಿದಾಗ, ಅಧಿಕಾರಿಗಳು ಪ್ಯಾಕೆಟ್ನೊಳಗೆ ಮಾದಕವಸ್ತುಗಳನ್ನು ಪತ್ತೆಹಚ್ಚಿ ಆತನನ್ನು ಬಂಧಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಲ್ಜಿಂದರ್ಗೆ ವಿಧಿಸಲಾದ ಗಲ್ಲು ಶಿಕ್ಷೆಯನ್ನು ತಡೆಯಲು ಮತ್ತು ಆತನನ್ನು ಬಿಡುಗಡೆಗೊಳಿಸಲು ತುರ್ತು ಕಾನೂನು ಹಾಗೂ ರಾಜತಾಂತ್ರಿಕ ಮಧ್ಯಪ್ರವೇಶಕ್ಕಾಗಿ ಆತನ ಕುಟುಂಬ ಕೋರಿದೆ.