ಢಾಕಾ, ಮೇ. 12 (DaijiworldNews/AA): ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಸುರಕ್ಷಿತರಾಗಿರದಿದ್ದರೆ, ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೂ ಸುರಕ್ಷತೆ ಇರುವುದಿಲ್ಲ ಎಂದು ಬಾಂಗ್ಲಾದೇಶದ ತೀವ್ರವಾದಿ ಧರ್ಮಗುರು ಮೌಲಾನ ಇನಾಯುತ್ತಲ್ಲಾ ಅಬ್ಬಾಸಿ ಭಾರತದ ವಿರುದ್ಧ ಕಿಡಿಕಾರಿದ್ದಾರೆ.

ಭಾರತೀಯ ಮುಸ್ಲಿಮರ ಕುರಿತು ಮಾತನಾಡಿದ ಅವರು, "ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಸುರಕ್ಷಿತರಾಗಿರದಿದ್ದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತರಾಗಲು ಅವಕಾಶ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜತಾಂತ್ರಿಕ ಮತ್ತು ರಾಜಕೀಯ ಒತ್ತಡವನ್ನು ತರಬೇಕು. ಮಾತ್ರವಲ್ಲದೇ ಬಾಂಗ್ಲಾದೇಶದ ಮುಸ್ಲಿಮರು ದೆಹಲಿಯಲ್ಲಿ ಇಸ್ಲಾಮಿಕ್ ಧ್ವಜ ಹಾರಿಸಲಿದ್ದಾರೆ" ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
"ಭಾರತದಲ್ಲಿ ಹಿಂದೂ ಕೇಂದ್ರಿತ ವ್ಯವಸ್ಥೆ ನಿರ್ಮಿಸುವುದು ಯಹೂದಿ ಮಾದರಿಯಂತಾಗುತ್ತದೆ. ಈಗ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದೇ ದಿಕ್ಕಿನಲ್ಲಿ ಸಾಗುತ್ತಿದೆ. ಗೋಮಾಂಸ ಅಂಗಡಿಗಳನ್ನು ಧ್ವಂಸ ಮಾಡಲಾಗುತ್ತಿದೆ ಮತ್ತು ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆ. ಇದನ್ನು ಯಾವುದೇ ಬೆಲೆ ತೆತ್ತಾದರೂ ಸರಿ ವಿರೋಧಿಸಬೇಕು" ಎಂದು ಹೇಳಿದ್ದಾರೆ.
ಇದೇ ವೇಳೆ ಬಾಂಗ್ಲಾದೇಶದ ತಾರಿಖ್ ರೆಹಮಾನ್ ಸರ್ಕಾರವನ್ನೂ ಟೀಕಿಸಿರುವ ಅವರು, "ಈ ಪರಿಸ್ಥಿತಿಯನ್ನು ಎದುರಿಸುವುದು ಬಾಂಗ್ಲಾದೇಶ ಸರ್ಕಾರದ ದೊಡ್ಡ ಜವಾಬ್ದಾರಿಯಾಗಿದೆ. ಭಾರತಕ್ಕೆ ಕಠಿಣ ಎಚ್ಚರಿಕೆ ನೀಡಬೇಕು. ಅಗತ್ಯವಿದ್ದರೆ ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸಬೇಕು" ಎಂದು ತಿಳಿಸಿದ್ದಾರೆ.