ಟೋಕಿಯೋ, ಫೆ. 09 (DaijiworldNews/TA): ಜಪಾನ್ನಲ್ಲಿ ಭಾನುವಾರ ನಡೆದ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ಸನೇ ತಕೈಚಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. 465 ಸದಸ್ಯರಿರುವ ಸಂಸತ್ತಿನ ಕೆಳಮನೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 233 ಸ್ಥಾನಗಳನ್ನು ತಕೈಚಿಯ ಲಿಬರಲ್ ಡೆಮಾಕ್ರಟಿಕ್ ಪಕ್ಷ (ಎಲ್ಡಿಪಿ) ಮಾತ್ರವೇ ಪಡೆದುಕೊಂಡಿದ್ದು, ಆಡಳಿತ ಮುಂದುವರಿಸಲು ಅಗತ್ಯ ಬಲವನ್ನು ಗಳಿಸಿದೆ.

ಮತದಾನದ ನಂತರ ಭಾನುವಾರ ಸಂಜೆ ಮತ ಎಣಿಕೆ ಪ್ರಾರಂಭವಾಗಿದ್ದು, ಮೊದಲ ಗಂಟೆಯಲ್ಲೇ ಆಡಳಿತಾರೂಢ ಎಲ್ಡಿಪಿ ನೇತೃತ್ವದ ಒಕ್ಕೂಟ ಗೆಲುವಿನ ದಿಕ್ಕಿನಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿತ್ತು. ಎರಡು ಗಂಟೆಗಳೊಳಗೆ ಎಲ್ಡಿಪಿ ಬಹುಮತದ ಗಡಿಯನ್ನು ದಾಟಿತು. ಈ ಚುನಾವಣೆಯಲ್ಲಿ ಸಂಸತ್ತಿನ ಕೆಳಮನೆಯ 465 ಸ್ಥಾನಗಳಿಗೆ 1,200 ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜನವರಿ 23 ರಂದು ಪ್ರಧಾನಿ ಸನೇ ತಕೈಚಿ ಕೆಳಮನೆಯನ್ನು ವಿಸರ್ಜಿಸಿ ಚುನಾವಣೆಗೆ ಕರೆ ನೀಡಿದ್ದು, ಇದು 1990ರ ಬಳಿಕ ಫೆಬ್ರವರಿಯಲ್ಲಿ ನಡೆದ ಮೊದಲ ಕೆಳಮನೆ ಚುನಾವಣೆಯಾಗಿದೆ.
ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಸನೇ ತಕೈಚಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಭಾರತ–ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಸಮರ್ಥ ನಾಯಕತ್ವದಲ್ಲಿ ಭಾರತ–ಜಪಾನ್ ಸ್ನೇಹ ಮತ್ತಷ್ಟು ಎತ್ತರಕ್ಕೆ ಏರಲಿದೆ ಎಂಬ ವಿಶ್ವಾಸವಿದೆ,” ಎಂದು ಮೋದಿ ತಿಳಿಸಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ತಕೈಚಿ ಅವರ ಲಿಬರಲ್ ಡೆಮಾಕ್ರಟಿಕ್ ಪಕ್ಷದ ನೇತೃತ್ವದ ಮೈತ್ರಿಕೂಟವು ಕೆಳಮನೆಯ ಮೂರನೇ ಎರಡರಷ್ಟು ಕ್ಷೇತ್ರಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈ ಫಲಿತಾಂಶವು ಚೀನಾದೊಂದಿಗಿನ ಹೆಚ್ಚುತ್ತಿರುವ ಬಿಕ್ಕಟ್ಟಿನ ನಡುವೆಯೇ ಜಪಾನ್ನ ಸೇನಾ ಸಾಮರ್ಥ್ಯ ವೃದ್ಧಿ ಹಾಗೂ ಆರ್ಥಿಕ ಉತ್ತೇಜನಕ್ಕೆ ಸಂಬಂಧಿಸಿದ ಬಲಪಂಥೀಯ ಕಾರ್ಯಸೂಚಿಯನ್ನು ಜಾರಿಗೊಳಿಸಲು ನೆರವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ಕಂಡುಬಂದಿತ್ತು. ವೇತನ ಸ್ಥಗಿತ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಜೀವನ ವೆಚ್ಚದ ಏರಿಕೆ ಸಾರ್ವಜನಿಕರಲ್ಲಿ ಅಸಮಾಧಾನ ಉಂಟುಮಾಡಿತ್ತು. 2023ರಲ್ಲಿ ಕಳಪೆ ಫಸಲು ಅಕ್ಕಿ ಬೆಲೆಗಳಲ್ಲಿ ಶೇ. 68ರಷ್ಟು ಏರಿಕೆಗೆ ಕಾರಣವಾಗಿದ್ದು, ದುರ್ಬಲಗೊಳ್ಳುತ್ತಿರುವ ಯೆನ್ ದಿನನಿತ್ಯದ ಆಹಾರ ಪದಾರ್ಥಗಳನ್ನು ಮತ್ತಷ್ಟು ದುಬಾರಿಯಾಗಿಸಿದೆ.
ಪ್ರಧಾನಿ ತಕೈಚಿ ಅವರು ಬಹುಮತ ಪಡೆಯಲು ವಿಫಲವಾದರೆ ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ್ದರು. ಚುನಾವಣೆಗೆ ಮುನ್ನ ಸುಮಾರು 4.6 ಮಿಲಿಯನ್ ಜನರು ಆರಂಭಿಕ ಮತ ಚಲಾಯಿಸಿದ್ದು, ಇದು ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ. 2.5ರಷ್ಟು ಕಡಿಮೆಯಾಗಿದೆ. ಉತ್ತರ ಮತ್ತು ಪಶ್ಚಿಮ ಜಪಾನ್ನಲ್ಲಿ ಸಂಭವಿಸಿದ ಭಾರೀ ಹಿಮಪಾತ ಮತದಾನ ಪ್ರಮಾಣ ಇಳಿಕೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.