ಮಂಗಳೂರು,ಸೆ.17 (DaijiworldNews/AK): 'ಪಂಚರಂಗಿ' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಗುರು ಹೆಗ್ಡೆ ನಿರ್ಮಿಸಿರುವ ಅಮರ್ಥ ಸಿನಿಮಾ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.


ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಉದ್ಯಮಿ ನಿರ್ಮಾಪಕ ಕನ್ಯಾನ ಸದಾಶಿವ ಶೆಟ್ಟಿ ಅವರು ಕನ್ನಡದಲ್ಲಿ ಒಂದು ಒಳ್ಳೆಯ ಸಿನಿಮಾವನ್ನು ನಿರ್ಮಿಸ ಬೇಕೆಂದಿದ್ದೆ. ಅದು ಅಮರ್ಥ ಸಿನಿಮಾದ ಮೂಲಕ ಈಡೇರಿದೆ ಎಂದರು.
ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಅವರು ಮಾತನಾಡಿ ಕನ್ನಡದಲ್ಲಿ ಒಳ್ಳೆಯ ಸದಭಿರುಚಿಯ ಸಿನಿಮಾಗಳು ಬರುತ್ತದೆ. ಇಂತಹ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸ ಬೇಕೆಂದರು. ಉದ್ಯಮಿ ಬರೋಡ ಶಶಿಧರ ಶೆಟ್ಟಿ ಅವರು ಮಾತನಾಡಿ ಕನ್ಯಾನ ಸದಾಶಿವ ಶೆಟ್ಟಿ ಅವರ ಬ್ಯಾನರ್ ನಿಂದ ಇನ್ನಷ್ಟು ಸಿನಿಮಾಗಳು ತೆರೆಗೆ ಬರಲಿ ಎಂದರು.
ಸಮಾರಂಭದಲ್ಲಿ ಸತೀಶ್ ಶೆಟ್ಟಿ ಪಟ್ಲ, ಚಿತ್ತರಂಜನ್, ರವೀಂದ್ರನಾಥ ರೈ, ಬಾಲಕೃಷ್ಣ ಶೆಟ್ಟಿ, ಸ್ವರ್ಣಸುಂದರ್, ತಾರಾನಾಥ ಶೆಟ್ಟಿ, ಕೃಷ್ಣ ತಾರೆಮಾರ್, ಡಾ ಮಮತಾ ಪಿ ಶೆಟ್ಟಿ, ಮೋಹನ್ ಕೊಪ್ಪಲ, ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು ಸಾಹಿಲ್ ರೈ ಕಾರ್ಯಕ್ರಮ ನಿರ್ವಹಿಸಿದರು.
ಗುರು ಹೆಗ್ಡೆ ಮತ್ತು ವಿನಯ್ ಪ್ರೀತಂ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಅಮರ್ಥ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ, ಮಂಜುಭಾಷಿಣಿ, ನಿರ್ದೇಶಕ ಗುರು ಹೆಗ್ಡೆ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಪ್ರೇಕ್ಷಕರಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. 'ಅಮರ್ಥ' ಸಿನಿಮಾವು ಸೆಪ್ಟೆಂಬರ್ 18ರಿಂದ ರಾಜ್ಯಾದ್ಯಂತ ಎಲ್ಲಾ ಪ್ರಮುಖ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ.
ಅಮರ್ಥ ಅಂದರೆ ಅಂತ್ಯ ಇಲ್ಲದ್ದು. ಇದು ಸಂಸ್ಕೃತ ಪದ. ಸಿನಿಮಾದಲ್ಲಿ ಒಳ್ಳೆಯ ಕತೆ ಇದೆ. ಕತೆಯೊಂದಿಗೆ ಹಾಸ್ಯ ಇದೆ. ಇದು ಪ್ರತಿಯೊಬ್ಬರ ಕತೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವಂತಹ ಕತೆಯನ್ನು ಅಮರ್ಥದಲ್ಲಿ ನೀಡಿದ್ದೇವೆ ಎಂದು ಗುರು ಹೆಗ್ಡೆ ತಿಳಿಸಿದ್ದಾರೆ. ಸಿನಿಮಾಕ್ಕೆ ಶಿರ್ವ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಅಮರ್ಥ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ.