ಬೆಂಗಳೂರು, ಫೆ. 07 (DaijiworldNews/AK): ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತಮ್ಮ 46 ವರ್ಷಗಳ ವೃತ್ತಿ ಪಯಣದಲ್ಲಿ ಹಲವಾರು ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅರ್ಜುನ್ ಸರ್ಜಾ, ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ, ಸುಮಾರು 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ತಮ್ಮ 46 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅನೇಕರು ತಮಗೆ ಹಲವು ರೀತಿಯಾಗಿ ವಂಚಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಸುತ್ತಮುತ್ತಲಿದ್ದವರೇ ನನ್ನನ್ನು ಮೋಸಗೊಳಿಸಿದರು. ಆ ಸಮಯದಲ್ಲಿ ನನಗೆ ಯಾವುದರ ಬಗ್ಗೆಯೂ ಅರಿವಿಲ್ಲದ ವಯಸ್ಸಾಗಿತ್ತು. ಬಹಳಷ್ಟು ಜನರು ನನ್ನನ್ನು ತಪ್ಪು ದಾರಿಗೆ ಎಳೆದರು ಎಂದು ಅವರು ಹೇಳಿಕೊಂಡಿದ್ದಾರೆ.
ಒಂದು ಸಮಯದಲ್ಲಿ ಬಹಳ ಸಂಪಾದನೆ ಮಾಡುತ್ತಿದ್ದೆ, ಸಂಪಾದನೆಯ ಸಮಯದಲ್ಲಿ ಸರಿಯಾದ ಕಡೆ ಹೂಡಿಕೆ ಮಾಡುವ ಬಗ್ಗೆ ಹಿರಿಯ ನಟ ಶೋಭನ್ ಬಾಬು ಅವರು ಹಲವಾರು ಬಾರಿ ಕಿವಿಮಾತು ಹೇಳಿದ್ದರು. ಹಣವನ್ನು ವ್ಯರ್ಥ ಮಾಡಬೇಡ, ಜಾಗರೂಕತೆಯಿಂದ ಹೂಡಿಕೆ ಮಾಡು ಎಂದು ಶೋಭನ್ ಬಾಬು ಅವರು ಆಗಾಗ್ಗೆ ಎಚ್ಚರಿಸುತ್ತಿದ್ದರು. ಆದರೆ ಅಂದು ಅವರ ಮಾತುಗಳು ನನಗೆ ಅರ್ಥವಾಗಿರಲಿಲ್ಲ. ಅವರ ಮಾತನ್ನು ಕೇಳಿದ್ದಿದ್ದರೆ ಇಂದು ನನ್ನ ಪರಿಸ್ಥಿತಿ ಇನ್ನೂ ಉತ್ತಮವಾಗಿರುತ್ತಿತ್ತು ಮತ್ತು ನನ್ನ ಮಕ್ಕಳಿಗಾಗಿ ದೊಡ್ಡ ಆಸ್ತಿಯನ್ನು ಉಳಿಸಬಹುದಿತ್ತು’ ಎಂದು ಅರ್ಜುನ್ ಸರ್ಜಾ ಪಶ್ಚಾತ್ತಾಪ ಪಟ್ಟಿದ್ದಾರೆ.
ಪ್ರಸ್ತುತ ‘ಸೀತಾ ಪಯಣ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರ ಪುತ್ರಿ ಐಶ್ವರ್ಯ ಸರ್ಜಾ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಸಿನಿಮಾ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ನಿರ್ಮಾಣವನ್ನು ಸಹ ಅರ್ಜುನ್ ಸರ್ಜಾ ಅವರೇ ಮಾಡಿದ್ದಾರೆ.