ಬೆಂಗಳೂರು, ಜೂ. 09 (DaijiworldNews/AA): ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ಮಾಡಲು ಅವಕಾಶ ಕೇಳಿ ಸಲ್ಲಿಸಿರುವ ಅರ್ಜಿ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವಾಗಲೇ ನಟ ಕಮಲ್ ಹಾಸನ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಅಲ್ಲಿ ಅವರಿಗೆ ಹಿನ್ನಡೆ ಉಂಟಾಗಿದೆ.

'ಕನ್ನಡ ಹುಟ್ಟಿದ್ದು ತಮಿಳಿನಿಂದ' ಎಂಬ ಕಮಲ್ ಹಾಸನ್ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಈ ಹೇಳಿಕೆ ನೀಡಿದ ಕಾರಣದಿಂದಲೇ ಅವರ ನಟನೆಯ 'ಥಗ್ ಲೈಫ್' ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡದಿರಲು ನಿರ್ಧರಿಸಲಾಯಿತು. ಈ ವಿಚಾರವಾಗಿ ಆರಂಭದಲ್ಲಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದ ಕಮಲ್ ಹಾಸನ್ ಅವರು, ಸಿನಿಮಾ ರಿಲೀಸ್ ವೇಳೆ ಭದ್ರತೆಗೆ ಮನವಿ ಮಾಡಿದ್ದರು.
ಈ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ 'ಇದು ಅಸಾಧ್ಯ. ಕನ್ನಡಿಗರ ಬಳಿ ಕ್ಷಮೆ ಕೇಳಿದರೆ ಮಾತ್ರ ಸಮಸ್ಯೆಗೆ ಪರಿಹಾರ' ಎಂದು ಪರೋಕ್ಷವಾಗಿ ತಿಳಿಸಿತ್ತು. ಸದ್ಯ ಅರ್ಜಿ ವಿಚಾರಣೆ ಜೂನ್ 10ರಂದು ನಡೆಯಬೇಕಿದೆ. ಆದರೆ ಅದಕ್ಕೂ ಮೊದಲೇ ಕಮಲ್ ಹಾಸನ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿ ಅವರಿಗೆ ಹಿನ್ನಡೆಯುಂಟಾಗಿದೆ.
'ಥಗ್ ಲೈಫ್ ವಿರುದ್ಧ ಕರ್ನಾಟಕದಲ್ಲಿ ಬೆದರಿಕೆಗಳು ಬರುತ್ತಿವೆ. ಚಿತ್ರ ಪ್ರದರ್ಶನಕ್ಕೆ ಬಿಡುತ್ತಿಲ್ಲ' ಎಂದು ಸುಪ್ರೀಂನಲ್ಲಿ ಚಿತ್ರತಂಡ ಅರ್ಜಿ ಸಲ್ಲಿಸಿದೆ. ಅರ್ಜಿ ವಿಚಾರಣೆಗೆ ನ್ಯಾಯಮೂರ್ತಿ ಪಿಕೆ ಮಿಶ್ರಾ ನಿರಾಕರಣೆ ಮಾಡಿದ್ದು, ಅರ್ಜಿದಾರರು ಹೈ ಕೋರ್ಟ್ ಮೊರೆ ಹೋಗುವಂತೆ ಸೂಚನೆ ನೀಡಿದ್ದಾರೆ.