ಬೆಂಗಳೂರು, ಫೆ 12 (DaijiworldNews/ AK): ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಅತ್ಯಂತ ನೀರಸವಾಗಿದ್ದು , ಸುಳ್ಳುಗಳ ಕಂತೆಯನ್ನೇ ತುರುಕಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿ ಸುತ್ತ ಗಿರಕಿ ಹೊಡೆಯುವುದನ್ನು ಬಿಟ್ಟರೆ ಇನ್ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎನ್ನುವುದು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.
![](https://daijiworld.ap-south-1.linodeobjects.com/Linode/img_tv247/12-02-2024akviji.jpg)
ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲಾಗದೆ ಗೊಂದಲದಲ್ಲಿ ಮುಳುಗಿರುವ ಸರ್ಕಾರ ಭವಿಷ್ಯದಲ್ಲಾದರೂ ಹೊಸ ಭರವಸೆ ಮೂಡಿಸುವ ಮಾತುಗಳನ್ನು ರಾಜ್ಯಪಾಲರಿಂದ ಹೇಳಿಸಿಲ್ಲ. ಬಡವರು, ರೈತರು, ನಿರುದ್ಯೋಗಿಗಳ ಪಾಲಿಗೆ ಕಂಟಕವಾಗಿರುವ ಈ ಸರ್ಕಾರ ಉದ್ಯಮಿಗಳು ಹಾಗೂ ಸ್ವಾವಲಂಬಿಗಳಿಗೆ ಹಾಗೂ ಸ್ವಂತ ಮನೆ ಹೊಂದುವ ಸೂರು ರಹಿತರಿಗೆ, ತೆರಿಗೆ ಹಾಗೂ ಮುದ್ರಾಂಕ ಶುಲ್ಕಗಳನ್ನು ಏರಿಸುವ ಮೂಲಕ ಆರ್ಥಿಕ ವ್ಯವಹಾರಗಳಿಗೆ ಧಕ್ಕೆ ತಂದೊಡ್ಡಿರುವುದು, ಮುಂದಿನ ದಿನಗಳಲ್ಲಿ ಕರ್ನಾಟಕದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆರೋಪಿಸಿದರು.
ಸದ್ಯ ಮಂಡಿಸಲಿರುವ ಬಜೆಟ್ ನಲ್ಲಿ ಯಾವ ವರ್ಗದ ಜನರೂ ಕನಿಷ್ಠ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದ ಸುಳಿವು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ ಎಂದು ಕಿಡಿಕಾರಿದರು.