ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹಂತಕರ ಬಗ್ಗೆ ಸುಳಿವು ನೀಡಿದವರಿಗೆ ರೂ. ಹತ್ತು ಲಕ್ಷ ಬಹುಮಾನ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದೆ. ಪ್ರಕರಣವನ್ನು ಬೇಧಿಸಲು ಪೊಲೀಸರು ಸಾರ್ವಜನಿಕರ ನೆರವನ್ನು ಕೋರಿದ ಬೆನ್ನಿಗೇ ಗೃಹಸಚಿವ ರಾಮಲಿಂಗ ರೆಡ್ಡಿ ಈ ಘೋಷಣೆಯನ್ನು ಮಾಡಿದ್ದಾರೆ.
ತನಿಖೆಯನ್ನು ತೀವ್ರಗೊಳಿಸುವಂತೆ ಮತ್ತು ಹಂತಕರನ್ನು ಆದಷ್ಟು ಬೇಗ ಬಂಧಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ನಾವು ಸಾಕಷ್ಟು ಅಧಿಕಾರಿಗಳನ್ನು ನೀಡಿದ್ದು ಅಗತ್ಯಬಿದ್ದಲ್ಲಿ ಇನ್ನೂ ಹೆಚ್ಚಿನ ಅಧಿಕಾರಿಗಳನ್ನು ನೀಡಲಾಗುವುದು ಎಂದು ರೆಡ್ಡಿ ತಿಳಿಸಿದರು.
![](https://daijiworld.ap-south-1.linodeobjects.com/iWeb/tvdaijiworld/img_tv247/08092017_gauri_award.jpg)
“ಹಂತಕರ ಸುಳಿವು ನೀಡಿದವರಿಗೆ ಸರಕಾರ ರೂ. ಹತ್ತು ಲಕ್ಷ ಬಹುಮಾನ ನೀಡಲಿದೆ” ಎಂದು ಗೃಹಸಚಿವರು ಮಾಧ್ಯಮದ ಮುಂದೆ ಘೋಷಿಸಿದರು.
ಬುಧವಾರದಂದು ರಾಜ್ಯ ಸರಕಾರ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸಲು 21 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ಘೋಷಿಸಿತ್ತು. ಈ ತಂಡವನ್ನು ಗುಪ್ತಚರ ಇಲಾಖೆಯ ಐಜಿಪಿ ಬಿಕೆ ಸಿಂಗ್ ಮುನ್ನಡೆಸುತ್ತಿದ್ದಾರೆ.