ಉಡುಪಿ, ನ 16 (DaijiworldNews/HR): ಉಡುಪಿ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ ಉಡುಪಿ ನೇಜಾರಿನ ಒಂದೇ ಕುಟುಂಬದ ನಾಲ್ವರನ್ನು ಅಮಾನುಷವಾಗಿ ಹತ್ಯೆಗೈದ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿ, ಬಂಧಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ನೇತೃತ್ವದ ಪೊಲೀಸ್ ಇಲಾಖೆಯನ್ನು ಉಡುಪಿ, ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಇವರು ಅಭಿನಂದಿಸಿದ್ದು, ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸರಕಾರವನ್ನು ಆಗ್ರಹಿಸಿದ್ದಾರೆ.
![](https://daijiworld.ap-south-1.linodeobjects.com/Linode/img_tv247/hr-161123-ronald.jpg)
ಪ್ರಕರಣದಲ್ಲಿ ಈವರೆಗಿನ ಪೊಲೀಸರ ಕಾರ್ಯವೈಖರಿ ಅಭಿನಂದನಾರ್ಹವಾಗಿದ್ದು, ಪೊಲೀಸರ ಮೇಲೆ ಜನರಿಗಿರುವ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಸರ್ಕಾರವು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಬೆಂಗಳೂರಿನ ಚರ್ಚ್ ಬ್ಲಾಸ್ಟ್ ವಿಶೇಷ ನ್ಯಾಯಾಲಯದಲ್ಲಿ ಸದ್ಯ ಯಾವುದೇ ಪ್ರಕರಣ ವಿಚಾರಣೆಗೆ ಬಾಕಿ ಇಲ್ಲದಿರುವ ಹಿನ್ನೆಲೆಯಲ್ಲಿ ನೇಜಾರು ಕೊಲೆ ಪ್ರಕರಣವನ್ನು ಸದ್ರಿ ವಿಶೇಷ ನ್ಯಾಯಾಲಯಕ್ಕೆ ವಹಿಸಿ, ಸದ್ರಿ ವಿಶೇಷ ನ್ಯಾಯಾಲಯವನ್ನು ಪೀಠಾಸೀನಾಧಿಕಾರಿ, ಪೂರಕ ಸಿಬ್ಬಂದಿ ಮತ್ತು ಪೀಠೋಪಕರಣ ಇತ್ಯಾದಿಗಳೊಂದಿಗೆ ಈ ಪ್ರಕರಣ ವಿಲೇವಾರಿ ಆಗುವ ತನಕ ಉಡುಪಿಗೆ ಸ್ಥಳಾಂತರಿಸಬೇಕೆಂದು ಮತ್ತು ಪ್ರಕರಣಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸುವುದರ ಮೂಲಕ ಸಂತ್ರಸ್ತ ಕುಟುಂಬಕ್ಕೆ ಶೀಘ್ರ ನ್ಯಾಯದಾನ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.