ಬೆಂಗಳೂರು,ಮಾ.20(AZM):’ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರಿಗೆ ಚಿತ್ರರಂಗವೇ ಬೆಂಬಲ ನೀಡುತ್ತದೆ’ ಎನ್ನುವ ರಾಕ್ ಲೈನ್ ವೆಂಕಟೇಶ್ ಹೇಳಿಕೆಯ ವಿರುದ್ಧ ನಿರ್ಮಾಪಕ ಟೇಶಿ ವೆಂಕಟೇಶ್ ಅವರು,ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/azm_200319_rockline.jpg)
ಸುಮಲತಾ ಅಂಬರೀಶ್ ಅವರಿಗೆ ಚಿತ್ರರಂಗವೇ ಬೆಂಬಲ ನೀಡುತ್ತದೆ ಎಂದು ರಾಕ್ ಲೈನ್ ವೆಂಕಟೇಶ್ ಅವರು ಏಕಪಕ್ಷೀಯವಾಗಿ ಘೋಷಿಸಿದ್ದು, ಯಾರ ಅಭಿಪ್ರಾಯವನ್ನು ಪಡೆದಿಲ್ಲ ಎಂದು ಟೇಶಿ ವೆಂಕಟೇಶ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಚಿತ್ರರಂಗದ ಯಾವ ವಿಭಾಗಗಳನ್ನು ರಾಕ್ ಲೈನ್ ವೆಂಕಟೇಶ್ ಸಂಪರ್ಕಿಸಿಲ್ಲ. ಯಾರೊಂದಿಗೂ ಚರ್ಚೆ ಮಾಡಿಲ್ಲ. ಅವರೊಬ್ಬರೇ ಏಕಪಕ್ಷೀಯವಾಗಿ ಸುಮಲತಾ ಅವರಿಗೆ ಚಿತ್ರರಂಗದ ಬೆಂಬಲವಿದೆ ಎಂದು ಘೋಷಿಸಿದ್ದಾರೆ. ಅದು ಸರಿಯಲ್ಲ. ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಫಿಲಂ ಚೇಂಬರ್ ಗೆ ದೂರು ನೀಡಲಾಗಿದೆ.
ಮನವಿ ಸ್ವೀಕರಿಸಿದ ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಅವರು, ಮಾರ್ಚ್ 29 ರಂದು ಕಾರ್ಯಕಾರಣಿ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.