ನವದೆಹಲಿ, ನ 24 (DaijiworldNews/DB): ಕಾಂಗ್ರೆಸ್ನ್ನು ದೂರುತ್ತಾ ದಿನದೂಡುವ ಬದಲು ನಿಮ್ಮ ದುರಾಡಳಿತದ ಬಗ್ಗೆ ಮಾತನಾಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ಗುಜರಾತ್ ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ವಿರುದ್ದ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ ಅವರು, ನರೇಂದ್ರ ಮೋದಿಯವರೇ ಕಾಂಗ್ರೆಸ್ನ್ನು ದೂರುತ್ತಾ ಸಮಯ ಕಳೆಯುವ ಬದಲು ನಿಮ್ಮ ದುರಾಡಳಿತದ ಬಗ್ಗೆ ಮಾತನಾಡಿ. ಗುಜರಾತ್ ಮಕ್ಕಳ ಭವಿಷ್ಯ ಹಾಳಾಗಲು ಕಾರಣವೇನು? ಅಪೌಷ್ಠಿಕತೆ ಹಾಗೂ ದೇಹ ತೂಕ ಕಡಿಮೆ ಹೊಂದಿರುವ ಮಕ್ಕಳ ಸಂಖ್ಯೆ 30 ರಾಜ್ಯಗಳ ಪೈಕಿ 29ನೇ ಸ್ಥಾನದಲ್ಲಿ ಗುಜರಾತ್ ಯಾಕಿದೆ? ಶಿಶುಮರಣ ಪ್ರಮಾಣದಲ್ಲಿಯೂ ಗುಜರಾತ್19ನೇ ಸ್ಥಾನದಲ್ಲಿರುವುದೇಕೆ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಕಳೆದ 27 ವರ್ಷಗಳಲ್ಲಿ ನಿಮ್ಮ ಆಡಳಿತಾವಧಿಯಲ್ಲಿ ಮಾಡಿದ ಹೊಣೆಗಾರಿಕೆಗಳ ಬಗ್ಗೆಗುಜರಾತ್ ಉತ್ತರ ಬಯಸುತ್ತಿದೆ ಎಂದಿದ್ದಾರೆ.
ರಾಷ್ಟ್ರದ ಅಧ್ಯಕ್ಷೀಯ ಚುನಾವಣೆಯಲ್ಲಿ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ಬೆಂಬಲಿಸಲಿಲ್ಲ. ಸಮಾಜಘಾತುಕ ಶಕ್ತಿಗಳು, ಮತೀಯವಾದಕ್ಕಷ್ಟೇ ವಿಪಕ್ಷಗಳು ಬೆಂಬಲ ನೀಡುತ್ತಿವೆ ಎಂದು ಮೋದಿ ಆರೋಪಿಸಿದ್ದರು.