ಮಂಗಳೂರು, ಮೇ.14 (DaijiworldNews/PY): "ವಿಪಕ್ಷಗಳೇ ಇದು ರಾಜಕಾರಣ ಮಾಡುವ ಸಮಯವಲ್ಲ. ಬದಲಾಗಿ ರಾಜ್ಯದ ಜನರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಮಾಡಬೇಕು" ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದ ವಿಪಕ್ಷಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತಿರುಗೇಟು ನೀಡಿದ್ದಾರೆ.
ಶುಕ್ರವಾರ ನಗರದ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಕೊರೊನಾದ ಎರಡನೇ ಅಲೆಯ ನಿಯಂತ್ರಣಕ್ಕಾಗಿ ದ. ಕ ಬಿಜೆಪಿಯ ಸಹಯೋಗದೊಂದಿಗೆ ಸ್ಥಾಪಿಸಲಾದ ಸಹಾಯ ಕೇಂದ್ರ ಹಾಗೂ ಇತರ ಸೇವಾ ಆಧಾರಿತ ಸಂಸ್ಥೆಗಳಿಂದ ಒಟ್ಟು 2,000 ಪೋನ್ ಕರೆಗಳು ಬಂದಿದೆ. ಸಹಾಯವಾಣಿಯು 100 ಆಂಬುಲೆನ್ಸ್ಗಳನ್ನು ಒದಗಿಸಿದ್ದು, 70 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 433 ಕಿಟ್ಗಳನ್ನು ವಿತರಿಸಲಾಗಿದೆ. 42 ಐಸಿಯು ಹಾಗೂ ವೆಂಟಿಲೇಟರ್ ಸೇವೆಗಳನ್ನು ಒದಗಿಸಲಾಗಿದ್ದು, 34 ಕೊರೊನಾ ರೋಗಿಗಳ ಅಂತಿಮ ಸಂಸ್ಕಾರಕ್ಕೆ ನೆರವು ನೀಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
"1,15,662 ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ನೀಡಲಾಗಿದೆ. ಜಿಲ್ಲೆಯಲ್ಲಿ 39,548 (60 ವರ್ಷಕ್ಕಿಂತ ಮೇಲ್ಪಟ್ಟ)ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 45-59 ವರ್ಷದ ಸುಮಾರು 1,14,287 ಮಂದಿ ಲಸಿಕೆಯ ಮೊದಲ ಡೋಸ್ ಹಾಗೂ 12,419 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 18-44 ವರ್ಷ ವಯಸ್ಸಿನ 1,802 ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
"ಜಿಲ್ಲೆಗೆ ಪಿಎಂ-ಕೇರ್ಸ್ ಅಡಿಯಲ್ಲಿ 30 ವೆಂಟಿಲೇಟರ್ಗಳು, ದಾನಿಗಳಿಂದ 24 ವೆಂಟಿಲೇಟರ್ಗಳು ಮತ್ತು ರಾಜ್ಯ ಸರ್ಕಾರದಿಂದ 32 ವೆಂಟಿಲೇಟರ್ಗಳು ಬಂದಿವೆ. ವೆಂಟಿಲೇಟರ್ಗಳನ್ನು 12 ರಿಂದ 86 ವೆಂಟಿಲೇಟರ್ಗಳಿಗೆ ಹೆಚ್ಚಿಸಲಾಗಿದೆ. ಎಂಪಿ-ಎಲ್ಎಡಿ ನಿಧಿಯಿಂದ 2.5 ಕೋಟಿ ರೂ.ಗಳನ್ನು ಜಿಲ್ಲಾಡಳಿತಕ್ಕೆ ಮಂಜೂರು ಮಾಡಿದೆ. 100 ವೆಂಟಿಲೇಟರ್ಗಳನ್ನು ಮಂಜೂರು ಮಾಡುವಂತೆ ನಾನು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇನೆ, ಅದರಲ್ಲಿ ಈಗಾಗಲೇ 40 ವೆಂಟಿಲೇಟರ್ಗಳನ್ನು ಮಂಜೂರು ಮಾಡಲಾಗಿದೆ" ಎಂದು ಹೇಳಿದ್ದಾರೆ..
"ಎಂಆರ್ಪಿಎಲ್ ವೆನ್ಲಾಕ್ನಲ್ಲಿ 93 ಲೀಟರ್ ಆಮ್ಲಜನಕ ಉತ್ಪಾದಿಸುವ ಘಟಕವನ್ನು ಸ್ಥಾಪಿಸಲಿದೆ. ಎಂಸಿಎಫ್ 80 ಲೀಟರ್ ಆಮ್ಲಜನಕ ಉತ್ಪಾದನಾ ಘಟಕವನ್ನು ಇಎಸ್ಐ ಹಾಗೂ ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಸ್ಥಾಪಿಸಲಿದೆ. ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಗೇಲ್ ಹಾಗೂ ಗೇಲ್ ಗ್ಯಾಸ್ ಆಕ್ಸಿಜೆನ್ ಉತ್ಪಾದನಾ ಘಟಕ ಸ್ಥಾಪಿಸಲಿದೆ. ಉಪ್ಪಿನಂಗಡಿ ಹಾಗೂ ಮೂಡುಬಿದಿರೆಯಲ್ಲಿ ಕೆಐಡಿಸಿಎಲ್, ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ. ಶವಾಗಾರದ ಸ್ಥಾಪನೆಗೆ ಇನ್ಫೋಸಿಸ್ ಮುಂದೆ ಬಂದಿದ್ದು, ಎಸ್ಇಝಡ್ ಜಿಲ್ಲೆಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಲು ಮುಂದೆ ಬಂದಿದೆ" ಎಂದು ತಿಳಿಸಿದ್ದಾರೆ.
"45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರ ಲಸಿಕೆ ಘೋಷಿಸಿದಾಗ ವಿಪಕ್ಷಗಳು ಟೀಕೆ ಮಾಡಲು ಆರಂಭಿಸಿದವು. ಸರ್ಕಾರ ಮಾಡುತ್ತಿರುವ ಕಾರ್ಯಗಳನ್ನು ವಿಪಕ್ಷಗಳು ದಾರಿ ತಪ್ಪಿಸುತ್ತಿವೆ. ಇದು ರಾಜಕೀಯ ಮಾಡುವ ಸಮಯವಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ವಿಪಕ್ಷಗಳು ಸಹಕರಿಸಬೇಕು" ಎಂದಿದ್ದಾರೆ.