ಮಂಗಳೂರು, ಮೇ.14 (DaijiworldNews/PY): ಕೊರೊನಾ ಸೋಂಕಿನ ಎರಡನೇ ಅಲೆ ನಡುವೆ ಕರಾವಳಿ ಜಿಲ್ಲೆಯಲ್ಲಿ ಡೆಂಘೀ ಜ್ವರವೂ ಕಾಣಿಸಿಕೊಂಡಿದೆ.
"ಕೊರೊನಾ ಸೋಂಕು ಹರಡುತ್ತಿರುವ ನಡುವೆ ಡೆಂಘೀ ಕಾಣಿಸಿಕೊಳ್ಳಲು ಆಗಾಗ ಬಿಟ್ಟುಬಿಟ್ಟು ಬರುವ ಮಳೆಯೇ ಕಾರಣ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಸಂಜೆ ವೇಳೆ ಮಾತ್ರವೇ ಮಳೆ ಬಂದು ಹೋಗುತ್ತಿದ್ದು, ನಿರಂತರ ಮಳೆಯಾಗುತ್ತಿಲ್ಲ. ಹಾಗಾಗಿ ಮಳೆ ನೀರು ಅಲ್ಲಲ್ಲಿ ಸಂಗ್ರಹವಾಗಿ ಅದರಲ್ಲಿ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆ ಉತ್ಪತ್ತಿಯಾಗಿ ಡೆಂಘೀ ರೋಗಕ್ಕೆ ಕಾರಣವಾಗುತ್ತದೆ" ಎಂದು ವೈದ್ಯಾಧಿಕಾರಿಗಳು ಹೇಳುತ್ತಿದ್ದಾರೆ.
ಈಗಾಗಲೇ ಡೆಂಗೀ ಜ್ವರ ಕಾಣಿಸಿಕೊಂಡವರ ಪೈಕಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ದ.ಕ ಜಿಲ್ಲೆಯ ಸುಳ್ಯ ಹಾಗೂ ಪುತ್ತೂರು ತಾಲೂಕುಗಳಲ್ಲಿ ಡೆಂಘೀ-ಕೊರೊನಾ ರೋಗ ಲಕ್ಷಣ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ.
"ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದ್ದು, ಈ ಭಾಗದಲ್ಲಿ ಎಂಟು ಮಂದಿ ಡೆಂಘೀ ಜ್ವರದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಪೈಕಿ ಇಬ್ಬರಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದ್ದು, ಜೊತೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಎರಡು ತಾಲೂಕುಗಳನ್ನು ಬಿಟ್ಟರೆ ಬೇರೆ ತಾಲೂಕುಗಳಲ್ಲಿ ಸದ್ಯ ಡೆಂಘೀ ಕಾಣಿಸಿಲ್ಲ. ಆದರೆ, ಶಂಕಿತ ಡೆಂಘೀ ಲಕ್ಷಣದ ಜ್ವರ ಕಂಡುಬಂದಿದೆ" ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
"ಕೊರೊನಾ ಸೋಂಕು, ಲಾಕ್ಡೌನ್ ಬಗ್ಗೆ ಚಿಂತಿಸುತ್ತಿರುವ ಜನರು ಮನೆಯ ಪರಿಸರ ಸ್ವಚ್ಛತೆಯನ್ನು ಮರೆತು ಬಿಟ್ಟಿದ್ದಾರೆ. ಸಂಜೆ ವೇಳೆಗೆ ಕೊಳಚೆ ನೀರಿನಲ್ಲಿ ಉತ್ಪತ್ತಿಯಾಗುವ ಅನಾಫಿಲಿಸ್ ಹೆಣ್ಣು ಸೊಳ್ಳೆ ರಾತ್ರಿ ವೇಳೆ ಕಚ್ಚಿ ಮಲೇರಿಯಾ ಅಂಟಿಸುತ್ತದೆ. ಈ ಹಿನ್ನೆಲೆ ಮನೆಯ ಪರಿಸರವನ್ನು ಸ್ವಚ್ಛಗೊಳಿಸಬೇಕು" ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
"ಕಳೆದ ವರ್ಷದ ಹಾಗೇ ಈ ಬಾರಿ ಸಾಂಕ್ರಾಮಿಕ ತಡೆಗೆ ಆರೋಗ್ಯ ಇಲಾಖೆ ಫಾಗಿಂಗ್ ನಡೆಸುವುದಿಲ್ಲ. ಇದರ ಬದಲು ಇಂಡೋರ್ ರಿಸಿಡ್ಯೂವಲ್ ಸ್ಪ್ರೇ ಸಿಂಪಡಣೆ ಮಾಡುತ್ತಾರೆ. ಈ ಕ್ರಿಮಿನಾಶಕಗಳನ್ನು ಗೋಡೆಗಳಿಗೆ ಸಿಂಪಡಿಸಿದರೆ ನಾಲ್ಕು ತಿಂಗಳವರೆಗೆ ಸೊಳ್ಳೆಗಳು ವಾಸಿಸುವುದಿಲ್ಲ" ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್ಚಂದ್ರ ಕುಲಾಲ್ ಹೇಳಿದ್ದಾರೆ.
ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 52 ಡೆಂಘೀ ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ 2 ಕೊರೊನಾ ಜೊತೆ ಡೆಂಘೀ ಕಾಣಿಸಿಕೊಂಡ ಪ್ರಕರಣಗಳಾಗಿವೆ. ಪ್ರಸ್ತುತ ಈಗಾಗಲೇ 252 ಮಲೇರಿಯಾ ಪ್ರಕರಣಗಳು ಕೂಡಾ ಕಾಣಿಸಿಕೊಂಡಿದೆ. ಮಂಗಳೂರಿನಲ್ಲೇ ಅತ್ಯಧಿಕ ಶೇ.70ರಷ್ಟು ಮಲೇರಿಯಾ ಪ್ರಕರಣಗಳು ವರದಿಯಾಗಿವೆ.