ಮಂಗಳೂರು, ಮೇ.14 (DaijiworldNews/PY): ಇಲ್ಲಿನ ಸಂತ ಆಗ್ನೇಸ್ ಕಾಲೇಜಿನ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜಯಂತ್ ಅವರು ಮೇ 13ರ ಗುರುವಾರದಂದು ಹೃದಯಾಘತದಿಂದ ನಿಧನರಾಗಿದ್ದಾರೆ.
ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರಾಧ್ಯಾಪಕರಾಗಿದ್ದ ಅವರು, ಅನೇಕ ಮಂದಿಗೆ ಖಗೋಳಶಾಸ್ತ್ರದ ಬಗ್ಗೆ ಅಭಿರುಚಿ ಹತ್ತಿಸಿದ್ದಾರೆ. ತಮ್ಮ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತಿರಿಗೆ ಗ್ರಹಣ, ಧೂಮಕೇತುಗಳ ಪರಿಚಯಿಸುತ್ತಿದ್ದರು. ಈ ನಿಟ್ಟಿನಲ್ಲಿ ಅವರು ನಗರದದಿಂದ ಸ್ವಲ್ಪ ದೂರದಲ್ಲಿ ಸರಿಪಲ್ಲ ಎಂಬಲ್ಲಿ ಒಂದು ಮನೆ ಮಾಡಿಕೊಂಡು, ಆಸಕ್ತರಿಗೆ ಆಕಾಶದ ಪರಿಚಯ ಮಾಡಿಸುತ್ತಿದ್ದರು. ಜಯಂತ್ ಅವರು ನಗರದ ಹವ್ಯಾಸಿ ಖಗೋಲವೀಕ್ಷಕರ ಸಂಘದ ಮೂಲಕ ಅನೇಕ ಚಟುವಟಿಕೆ ಮಾಡುತ್ತಾ ಕ್ರಿಯಾಶೀಲರಾಗಿದ್ದರು.
ಇವರು ಸಂಗೀತ ಸೇರಿದಂತೆ ನಾಟಕ, ಚಾರಣ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದರು. ಕಿರಿಯರೊಂದಿಗೆ ಇವರು ಸದಾ ಸ್ನೇಹಭಾವದಿಂದ ಇರುತ್ತಿದ್ದು, ಸರಳ, ಸಜ್ಜನ ವ್ಯಕ್ತಿಯಾಗಿದ್ದರು. ಸಂಡೇ ಸೈನ್ಸ್ ಸ್ಕೂಲ್ನಂತಹ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಹಲವಾರು ವರ್ಷ ವಿಜ್ಞಾನ ಕಲಿಕೆ ಎನ್ನುವ ಪ್ರಯೋಗ ನಡೆಸಿದ್ದರು.
ಬಗಲಲ್ಲಿ ಒಂದು ಚೀಲ ಕೈಯಲ್ಲೊಂದು ಛತ್ರಿ, ಚೌಕ ಫ್ರೇಮ್ನ ಕನ್ನಡಕ ಸದಾ ನಗುಮುಖದ ಶಾಂತ ವ್ಯಕ್ತಿತ್ವ. ನೀವು ನಮ್ಮೊಂದಿಗೆ ಇಲ್ಲದಿದ್ದರೂ ನಿಮ್ಮ ಬದುಕು ನಮಗೆ ಸದಾ ಮಾರ್ಗದರ್ಶಕ, ಸ್ಫೂರ್ತಿ ಎಂದು ಅವರ ವಿದ್ಯಾರ್ಥಿಗಳು ಹೇಳಿದ್ದಾರೆ.