ಮಂಗಳೂರು, ಮೇ 12 (DaijiworldNews/MB) : ಕ್ಯಾಥೊಲಿಕ್ ಸಭಾದ ಕೇಂದ್ರ ಸಮಿತಿಯು ಮೇ 12 ರ ಬುಧವಾರ ಇಲ್ಲಿನ ಕೊಡಿಯಾಲ್ಬೈಲಿನ ಬಿಷಪ್ ಹೌಸ್ ಪ್ರಾಂಗಣದಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಕಿಟ್ ವಿತರಣೆಗೆ ಚಾಲನೆ ನೀಡಿ ಹಾರೈಸಿದರು.
ಆಧ್ಯಾತ್ಮಿಕ ನಿರ್ದೇಶಕ ವಂ.ಫಾ. ಮ್ಯಾಥ್ಯೂ ವಾಸ್, ದಾಯ್ಜಿವರ್ಲ್ಡ್ ಮಾಧ್ಯಮ ಸಂಪಾದಕ ವಾಲ್ಟರ್ ನಂದಳಿಕೆ, ಕ್ಯಾಥೊಲಿಕ್ ಸಭಾದ ಅಧ್ಯಕ್ಷ ಸ್ಟಾನಿ ಲೋಬೊ, ನಿಯೋಜಿತ ಅಧ್ಯಕ್ಷ ರಾಜು ಸ್ಟೀಫನ್ ಕುಂಬ್ಳೆ, ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್, ಕೋಶಾಧಿಕಾರಿ ಮೆಲ್ರಿಡಾ ರೊಡ್ರಿಗಸ್ ಹಾಗೂ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಉಪಸ್ಥಿತರಿದ್ದರು.
ಈ ಅಭಿಯಾನಕ್ಕೆ ಹಾರೈಸುತ್ತಾ ಮಾತನಾಡಿದ ಬಿಷಪ್, ''ಈ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ವಿಶ್ವದ ಮೂಲೆ ಮೂಲೆಯಲ್ಲಿ ಸಾವಿರಾರು ಜನರು ಬಳಲುತ್ತಿದ್ದಾರೆ. ಮೂಲಭೂತ ಅವಶ್ಯಕತೆಗಳಿರುವ ಜನರಿಗೆ ಬೇಕಾದ ಸಹಾಯ ಮಾಡಲು ಸರ್ಕಾರಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಸರ್ಕಾರದ ಹೊರತಾಗಿ, ವಿವಿಧ ಸಮುದಾಯಗಳು, ಎನ್ಜಿಒಗಳು ಅಗತ್ಯವಿರುವವರಿಗೆ ಸಹಾಯ ಮಾಡುವಲ್ಲಿ ನಿರತರಾಗಿದೆ. ತೊಂದರೆಯಲ್ಲಿರುವ ನಮ್ಮ ಸಹ ಜೀವಿಗಳ ಮೇಲೆ ಕೊಂಚ ಕಾಳಜಿ ತೋರಿಸುವುದು ನಮ್ಮ ಕರ್ತವ್ಯ. ಇದು ನಾವು ಪರಸ್ಪರ ಪ್ರೀತಿಸುತ್ತೇವೆ ಎಂಬುವುದರ ಖಾತರಿ. ಈ ಸಹಾಯದ ಮೂಲಕ ನಾವು ದೇವರ ಅಸ್ತಿತ್ವವನ್ನು ಕಾಣುತ್ತೇವೆ. ಆಹಾರ ಕಿಟ್ ವಿತರಣೆ ಮಾಡುವ ಕ್ಯಾಥೋಲಿಕ್ ಸಭಾ ಮತ್ತು ಅದರ ಸದಸ್ಯರಿಗೆ ನಾನು ಎಲ್ಲಾ ಯಶಸ್ಸನ್ನು ಬಯಸುತ್ತೇನೆ. ಸಾಂಕ್ರಾಮಿಕ ಸಮಯದಲ್ಲಿ ಸ್ವಯಂಪ್ರೇರಿತರಾಗಿ ಅವರು ಮಾಡುವ ಈ ಸೇವೆ ಪ್ರಶಂಸನೀಯ'' ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಟರ್ ನಂದಳಿಕೆ ಅವರು, ''ಕ್ಯಾಥೊಲಿಕ್ ಸಭಾ ಈಗಾಗಲೇ ಸಾಮಾಜಿಕ ಸೇವೆಗೆ ಹೆಸರುವಾಸಿಯಾಗಿದೆ. ಸಾಮಾಜಿಕ ಕಾರ್ಯ ಮಾಡುವಲ್ಲಿ ಇತಿಹಾಸ ಸೃಷ್ಟಿಸಿರುವ ಕ್ಯಾಥೊಲಿಕ್ ಸಭಾ ತಮ್ಮ ಹಲವಾರು ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪುತ್ತದೆ. ಈಗಾಗಲೇ ನಿಯಂತ್ರಣ ತಪ್ಪಿದ ಸಾಂಕ್ರಾಮಿಕ ರೋಗದಿಂದಾಗಿ ಇಡೀ ಸಮಾಜವೇ ತೊಂದರೆಯಲ್ಲಿದೆ. ಲಾಕ್ಡೌನ್ನಂತಹ ನಿರ್ಬಂಧವು ಬಡ ಜನರ ಜೀವನವನ್ನು ಇನ್ನಷ್ಟು ಶೋಚನೀಯವಾಗಿಸಿದೆ. ಆದರೆ ಜನರ ಪ್ರಾಣ ಉಳಿಸಲು ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಈ ಸಮಯದಲ್ಲಿ, ಕ್ಯಾಥೊಲಿಕ್ ಸಭಾ ಮತ್ತು ಇತರ ಸಾಮಾಜಿಕ ಸೇವಾ ಘಟಕಗಳು ಜನರಿಗೆ ಸಹಾಯಹಸ್ತ ಚಾಚಬೇಕಾಗಿದೆ. ಕ್ಯಾಥೊಲಿಕ್ ಸಭಾ ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆ ಇಟ್ಟಿದೆ ಎಂದು ನಾನು ಭಾವಿಸುತ್ತೇನೆ'' ಎಂದು ಹೇಳಿದರು.
ಇನ್ನು ಸ್ಟಾನಿ ಲೋಬೊ ಮಾತನಾಡಿ, ''ಮೊದಲ ಹಂತದಲ್ಲಿ, ಅಗತ್ಯವಿರುವವರಿಗೆ 1,080 ಕಿಟ್ಗಳನ್ನು ವಿತರಿಸಲು ನಾವು ಯೋಜನೆ ರೂಪಿಸಿದ್ದೇವೆ. ಎರಡನೇ ಹಂತದಲ್ಲಿ ಅಷ್ಟೇ ಸಂಖ್ಯೆಯ ಕಿಟ್ಗಳನ್ನು ವಿತರಿಸುತ್ತೇವೆ. ನಾವು ಈ ಅಭಿಯಾನವನ್ನು ಶೀಘ್ರವೇ ಸ್ಥಗಿತಗೊಳಿಸುವುದಿಲ್ಲ. ಸರ್ಕಾರದ ನಿರ್ಬಂಧಗಳು ಹಿಂಪಡೆದ ಬಳಿಕವೂ ನಾವು ಈ ಅಭಿಯಾನ ಮುಂದುವರೆಸಬೇಕಾಗುತ್ತದೆ. ಆದ್ದರಿಂದ ದಾನ ಮಾಡಲು ಬಯಸುವವರು ನಮ್ಮೊಂದಿಗೆ ಕೈಜೋಡಿಸಬೇಕು'' ಎಂದು ವಿನಂತಿಸಿದ್ದಾರೆ.
ಕಾರ್ಯದರ್ಶಿ ಅಲ್ಫೋನ್ಸ್ ಲೋಬೊ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.