ಮಂಗಳೂರು, ಮೇ 03 (DaijiworldNews/MB) : ಪಶ್ಚಿಮ ಬಂಗಾಳದ ಹೈ ವೋಲ್ಟೇಜ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತರೂ, ದಕ್ಷಿಣ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ತಮ್ಮ ಪ್ರಾಬಲ್ಯ ತೋರಿಸುವಲ್ಲೂ ವಿಫಲವಾದರೂ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಗೆದ್ದ ಬಿಜೆಪಿಯೂ ಉತ್ತಮ ಮತಗಳಿಸಿದೆ ಎಂದು ಬಿಜೆಪಿ ನಾಯಕರು ಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮೇ 2 ರ ಭಾನುವಾರ ಪಂಚ ರಾಜ್ಯಗಳ ಚುನಾವಣೆ ಬಗ್ಗೆ ಮಾತನಾಡಿ, "ಬಿಜೆಪಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಉತ್ತಮ ಮತ ಗಳಿಸಿದೆ" ಎಂದು ಹೇಳಿದರು.
"ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬಂದಿವೆ. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉತ್ತಮ ಪ್ರಯತ್ನ ಮಾಡಿದೆ. ಅಸ್ಸಾಂನಲ್ಲಿ ಎರಡನೇ ಬಾರಿಗೆ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿದೆ" ಎಂದು ಹೇಳಿದ್ದಾರೆ.
"ಪುದುಚೇರಿಯಲ್ಲಿ ನಾವು ಶೂನ್ಯದಿಂದ 11 ಸ್ಥಾನಗಳನ್ನು ಗೆಲ್ಲುವತ್ತ ಸಾಗಿದ್ದೇವೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಬಿಜೆಪಿ ಶೇಕಡಾವಾರು ಉತ್ತಮ ಮತಗಳನ್ನು ಗಳಿಸಿದೆ. ಬಸವಕಲ್ಯಾಣದಲ್ಲಿ ನಡೆದ ಉಪಚುನಾವಣೆಯಲ್ಲಿ ನಾವು ಜಯಗಳಿಸಿದ್ದೇವೆ. ಬೆಳಗಾವಿ ಲೋಕಸಭಾ ಉಪಚುನಾವಣೆಯೂ ಬಿಜೆಪಿ ಪರವಾಗಿದೆ" ಎಂದು ಹೇಳಿದರು.
"ದೇಶದಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿದ ಏಕೈಕ ಪಕ್ಷ ಬಿಜೆಪಿ. ಭಾರತದ ಜನರು ನರೇಂದ್ರ ಮೋದಿಯವರ ಆಡಳಿತವನ್ನು ಒಪ್ಪಿಕೊಂಡಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಅಥವಾ ಪುದುಚೇರಿಯಲ್ಲಿ ಆಗಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್ ವಿಫಲವಾಗಿದೆ'' ಎಂದರು.
"ಪಕ್ಷದ ವಿಜಯವನ್ನು ಆಚರಿಸದಂತೆ ನಾನು ಬಿಜೆಪಿಯ ಎಲ್ಲಾ ಜಿಲ್ಲಾಧ್ಯಕ್ಷರಿಗೆ ನಿರ್ದೇಶನ ನೀಡಿದ್ದೇನೆ. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ನಾವು ಸ್ಪಂದಿಸಬೇಕು. ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜನರಿಗೆ ಸೇವೆ ಸಲ್ಲಿಸುವ ಮೂಲಕ ನಾವು ಸಹಕರಿಸಬೇಕು'' ಎಂದು ಹೇಳಿದರು.
ಮಸ್ಕಿ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡಿರುವ ಬಗ್ಗೆ ಮಾತನಾಡಿದ ಅವರು, ''ಮುಂದಿನ ದಿನಗಳಲ್ಲಿ ಸೋಲಿನ ಕಾರಣಗಳ ಬಗ್ಗೆ ಪಕ್ಷವು ಆತ್ಮಾವಲೋಕನ ಮಾಡಲಿದೆ'' ಎಂದು ತಿಳಿಸಿದರು.