ಮಂಗಳೂರು, ಮೇ.02 (DaijiworldNews/HR): ವೆನ್ಲಾಕ್ ಆಸ್ಪತ್ರೆಯ ವೈದ್ಯರು ಕೊರೊನಾ ಸೋಂಕಿತರ ಆರೈಕೆಗಾಗಿ ಅವರ ಕುಟುಂಬ ಸದಸ್ಯರನ್ನು ಕೂಡ ನಿಯೋಜನೆ ಮಾಡುತ್ತಿದ್ದಾರೆ ಎಂದು ಕೋಡಿಕಲ್ ನಿವಾಸಿ 74 ವರ್ಷದ ಕೊರೊನಾ ಸೋಂಕಿತ ವೃದ್ದೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಘಟನೆ ಕುರಿತು ಮಂಗಳೂರು ಮನಪಾ ವಿಪಕ್ಷ ನಾಯಕ ಎ.ಸಿ.ವಿನಯರಾಜ್ ಪ್ರಕಟನೆಯ ಮೂಲಕ ಹೇಳಿಕೆ ನೀಡಿದ್ದು, " 74 ವರ್ಷದ ವೃದ್ಧೆಯನ್ನು ಆರಂಭದಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಕೊರೊನಾ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಕಂಡು ಬಂದಿದ್ದು, ಅವರನ್ನು ವೆನ್ಲಾಕ್ ಆಸ್ಪತ್ರೆಗೆ ವೃದ್ಧೆಯನ್ನು ದಾಖಲಿಸಿದರು. ಅಲ್ಲಿನ ವೈದ್ಯರು ಸೋಂಕು ಪೀಡಿತ ವೃದ್ಧೆಯ ಆರೈಕೆಗೆ ಅವರ ಸೊಸೆಯನ್ನೇ ನಿಯೋಜಿಸಿದ್ದು, ಇದು ಎಷ್ಟು ಸರಿ? ವೃದ್ಧೆಯಿಂದ ಸೊಸೆಗೆ, ಸೊಸೆಯಿಂದ ಇತರರಿಗೆ ಸೋಂಕು ಹರಡುವುದಿಲ್ಲವೇ? ಜಿಲ್ಲಾಡಳಿತ ತಪ್ಪಿತಸ್ಥ ವೈದ್ಯರ ವಿರುದ್ಧ ಏನು ಕ್ರಮ ಕೈಗೊಳ್ಳಲಿದೆ" ಎಂದು ಪ್ರಶ್ನಿಸಿದ್ದಾರೆ.
ಇನ್ನು ವಾರ್ಡ್ನಿಂದ ವೃದ್ಧೆಯ ಸೊಸೆಯನ್ನು ಹೊರಗಡೆ ಹೋಗಲು ಕೂಡ ಬಿಡದಿರುವುದು ಕಾನೂನುಬಾಹಿರ ನಡೆಯಾಗಿದ್ದು, ಆ ವಾರ್ಡ್ನಲ್ಲಿ 6 ಮಂದಿ ಇತರ ಸೋಂಕಿತರಿದ್ದು ಅವರ ಬಳಿಯೂ ಕೂಡ ಅವರನ್ನು ನೋಡಿಕೊಳ್ಳಲು ಮನೆ ಮಂದಿಯನ್ನು ನಿಲ್ಲಿಸಿರುವುದು ಕಂಡು ಬಂದಿದ್ದು, ತಕ್ಷಣ ಇಂತಹ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಎ.ಸಿ ವಿನಯರಾಜ್ ಆಗ್ರಹಿಸಿದ್ದಾರೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ, ರಾಜೇಂದ್ರ ಕೆ.ವಿ ಪ್ರತಿಕ್ರಿಯಿಸಿ, "ಕೊರೊನಾ ರೋಗಿಯೊಂದಿಗೆ ಯಾರನ್ನು ಉಳಿಸುಕೊಳ್ಳುವುದಕ್ಕೆ ಅವಕಾಶ ನೀಡುತ್ತಿಲ್ಲ, ಮನೆಯವರ ಸಹಕಾರ ತುಂಬಾ ಅಗತ್ಯವೆಂದು ಅವರೇ ವಿನಂತಿಸಿದರೆ ಮಾತ್ರ ಅವರ ಅನುಮತಿ ಪತ್ರದೊಂದಿಗೆ ಅವಕಾಶ ಇದೆ. ಹಾಗಾಗಿ ಒಂದೊಂದು ಪ್ರಕರಣ ಹಿಡಿದು ವೈದ್ಯರ ಮೇಲೆ ಇಂತಹ ಪರಿಸ್ಥಿತಿಯಲ್ಲಿ ಆರೋಪ ಮಾಡುವುದು ಸರಿಯಲ್ಲ" ಎಂದಿದ್ದಾರೆ.