ಮಂಗಳೂರು, ಮೇ.02 (DaijiworldNews/HR): ಕೋಡಿಯಾಲ್ಬೈಲ್ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ವಾಗ್ವಾದ ನಡೆದು ಬಳಿಕ ಹೊಡೆದಾಡಿಕೊಂಡ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೈದಿಗಳಾದ ಅಭಿಷೇಕ್, ಸಮೀರ್ ಮತ್ತು ಅರ್ಫಾನ್ ಎಂಬವರ ಮಧ್ಯೆ ಹೊಡೆದಾಟ ನಡೆದಿದ್ದು, ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಭಿಷೇಕ್ ಮತ್ತು ಸಮೀರ್ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ಪರಸ್ಪರ ಹೊಡೆದಾಡಿಕೊಂಡಿದ್ದಾರೆ, ಇದನ್ನು ಗಮನಿಸಿದ ಜೈಲು ಸಿಬ್ಬಂದಿ ತಕ್ಷಣ ಇಬ್ಬರನ್ನೂ ಬಿಡಿಸಿದ್ದಾರೆ ಎನ್ನಲಾಗಿದೆ.
ಇನ್ನು ಮಂಗಳೂರು ನಗರದ ಕಾರಾಗೃಹದಲ್ಲಿ ಏ.25ರಂದು ಪಣಂಬೂರು ಠಾಣೆಯಲ್ಲಿ ದರೋಡೆ ಪ್ರಕರಣದಲ್ಲಿ ಬಂಧಿತನಾಗಿದ್ದ ಸಮೀರ್ ಎಂಬಾತ ಜೈಲಿನಲ್ಲಿದ್ದ ಇತರ ವಿಚಾರಣಾಧೀನ ಕೈದಿಗಳಿಗೆ ಹಲ್ಲೆ ನಡೆಸಿದ್ದು, ಮುಲ್ಕಿ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ಅನ್ಸಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣದಲ್ಲಿ ಗಲಾಟೆ ತಡೆಯಲು ಹೋದ ಜೈಲು ಸಿಬ್ಬಂದಿಗೂ ಹಲ್ಲೆ ಮಾಡಲಾಗಿತ್ತು.
ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಕೈದಿಗಳು ಹೊಡೆದಾದಿಕೊಂಡಿರುವುದು ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ.