ಬೈಂದೂರು, ಮೇ 01 (DaijiworldNews/MB) : ಒತ್ತಿನಣೆ ತಿರುವಿನಲ್ಲಿ ಟಿಪ್ಪರ್ ರಸ್ತೆಯ ತಡೆಬೇಲಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಟಿಪ್ಪರ್ ಚಾಲಕ ಸಾವಿಗೀಡಾದ ಘಟನೆ ನಡೆದಿದೆ.
ಶುಕ್ರವಾರ ಮಧ್ಯಾಹ್ನ ಟಿಪ್ಪರ್ ಶಿರೂರು ಕಡೆಯಿಂದ ಬೈಂದೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ನೇ ಪೂರ್ವ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕ್ ಒಂದನ್ನು ಒವರ್ಟೇಕ್ ಮಾಡಿಕೊಂಡು ಹೋಗಿದ್ದು ಒತ್ತಿನೆಣೆ ತಿರುವು ಬಳಿ ಟಿಪ್ಪರ್ ಲಾರಿಯು ಚಾಲಕನ ಹತೋಟಿ ತಪ್ಪಿ ರಸ್ತೆಯ ತಡೆಬೇಲಿಗೆ ಢಿಕ್ಕಿ ಹೊಡೆದು ಮಗುಚಿ ಸುಮಾರು 10 ಅಡಿ ಅಳದಲ್ಲಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮ ಬದಿಯ ರಸ್ತೆಗೆ ಬಿದ್ದಿದೆ.
ಟಿಪ್ಪರ್ ಲಾರಿಯ ಚಾಲಕ ವಿಠಲ್ ಚೌವ್ವಾಣ್ ಒಳಗೆ ಸಿಕ್ಕಿ ಹಾಕಿಕೊಂಡಿದ್ದು ಮಹಮ್ಮದ್ ಜಲೀಲ್ ಹಾಗೂ ಇತರರು ಸೇರಿ ಟಿಪ್ಪರ್ ಲಾರಿ ಚಾಲಕನನ್ನು ಹೊರ ತೆಗೆದು ಅಂಬುಲೆನ್ಸ್ನಲ್ಲಿ ಬೈಂದೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ನಂತರ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಬ್ರಹ್ಮಾವರ ಬಳಿ ತಲುಪಿದಾಗ ಟಿಪ್ಪರ್ ಲಾರಿ ಚಾಲಕನು ಮೃತಪಟ್ಟಂತೆ ಕಂಡಿದ್ದು ನಂತರ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಟಿಪ್ಪರ್ ಲಾರಿ ಚಾಲಕ ಮೃತಪಟ್ಟಿರುವುದಾಗಿ ಧೃಡಪಡಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.