ಮಲ್ಪೆ, ಮೇ. 01 (DaijiworldNews/HR): ಪಡುತೋನ್ಸೆ ಗ್ರಾಮದ ಕಂಬಳತೋಟ ಪರಿಸರದಲ್ಲಿ ಅನಧೀಕೃತವಾಗಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಯವರ ಕಚೇರಿಯಿಂದ ಬಂದ ದೂರಿನನ್ವಯ ಗಣಿ ಅಧಿಕಾರಿ ಸಂದ್ಯಾ ಕುಮಾರಿ ಹಾಗೂ ಸಿಬ್ಬಂದಿಗಳು ಕಛೇರಿ ವಾಹನದಲ್ಲಿ ತೆರಳಿದ್ದು, ಈ ವೇಳೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಇರ್ಷಾದ್ ನನ್ನ ಮರಳು ಧಕ್ಕೆಯನ್ನು ಪರಿಶೀಲಿಸಲು ನಿಮಗೇನು ಆಧಾರವಿದೆ, ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಮರಳು ಧಕ್ಕೆಯ ತೋಟದಲ್ಲಿದ್ದ ಟಿಪ್ಪರ್ ವಾಹನವನ್ನು ಪರಿಶೀಲಿಸಲು ಸಂದ್ಯಾ ಕುಮಾರಿ ಹೋದಾಗ ಆರೋಪಿಯು ಐದಾರು ಜನರೊಂದಿಗೆ ಗುಂಪು ಸೇರಿಸಿಕೊಂಡು ಕಛೇರಿ ವಾಹನದ ಚಾಲಕನಿಗೆ ಹೊಡೆಯಲು ಪ್ರಯತ್ನ ಪಟ್ಟಿರುತ್ತಾರೆ, ನಂತರ ನಮ್ಮ ಇಲಾಖಾ ವಾಹನವನ್ನು ಚಲಾಯಿಸಿಕೊಂಡು ಹೋಗುವಂತೆ ಚಾಲಕನಿಗೆ ತಿಳಿಸಿದಾಗ ಆರೋಪಿಯು ಕಾರನ್ನು ಅಡ್ಡ ಇರಿಸಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ, ಸಂದ್ಯಾ ಕುಮಾರಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.