Karavali
ಬಂಟ್ವಾಳ: 'ಮತ್ತೊಬ್ಬರನ್ನು ನಿಂದಿಸುವ ಹೊತ್ತಲ್ಲ, ಭಯಾನಕ ರೋಗದ ವಿರುದ್ಧದ ಯುದ್ಧದ ಸಮಯ'- ಜಿಲ್ಲಾಧಿಕಾರಿ
- Sat, May 01 2021 04:17:05 PM
-
ಬಂಟ್ವಾಳ, ಮೇ 1 (DaijiworldNews/MS): ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಷ್ಟು ಸೌಕರ್ಯ ಬಂಟ್ವಾಳ ತಾಲೂಕಿನಲ್ಲೇ ಇದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ, ಇಲ್ಲಿನ ರೋಗಿಗಳನ್ನು ಅನಿವಾರ್ಯ ಸ್ಥಿತಿ ಬಂದರೆ ಮಾತ್ರ ವೆನ್ಲಾಕ್ ಗೆ ದಾಖಲಿಸಿ, ಇದು ಭಯಾನಕ ರೋಗದ ವಿರುದ್ಧದ ಯುದ್ಧದ ಸಮಯ, ಮತ್ತೊಬ್ಬರನ್ನು ನಿಂದಿಸುವ ಹೊತ್ತಲ್ಲ. ಪ್ರತಿಯೊಬ್ಬ ಅಧಿಕಾರಿ,ಸಿಬ್ಬಂದಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಸಮನ್ವಯತೆಯಿಂದ ಕೋವಿಡ್ ನಿಗ್ರಹದಲ್ಲಿ ತೊಡಗಿಸಿಕೊಳ್ಳುವಂತೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರು ಸೂಚಿಸಿದ್ದಾರೆ.
ಅವರು ಶನಿವಾರ ಬಿ.ಸಿ.ರೋಡಿನ ಎಸ್ಎ ಎಸ್ ಆರ್ ವೈ ಸಭಾಂಗಣದಲ್ಲಿ ಕೋವಿಡ್ -19 ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೋವಿಡ್ ನಿಯಂತ್ರಣ ಕುರಿತಾಗಿ ಅವಲೋಕನ ನಡೆಸಿದರು. ಬಂಟ್ವಾಳ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿರುವ 8 ವೆಂಟಿಲೇಟರ್ ಗಳ ಪೈಕಿ ಮೂರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಒದಗಿಸಿ, ಎರಡು ಹೆಚ್ಚುವರಿಯಾಗಿ ಒದಗಿಸಿ ತಾಲೂಕಿನಲ್ಲಿಯೇ ಅಗತ್ಯದ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ ಅವರು, ಅನಗತ್ಯವಾಗಿ ವೆನ್ ಲಾಕ್ ಗೆ ಕಳುಹಿಸುವುದು ಬೇಡ ಎಂದು ನಿರ್ದೇಶನ ನೀಡಿದರು. ಆಕ್ಸಿಜನ್ ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ ಅವರು, ಎಂಸಿಎಫ್ ವತಿಯಿಂದ ಅತೀ ಶೀಘ್ರದಲ್ಲಿ ಅಮ್ಲಜನಕದ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ನೆರವು ನೀಡುವುದಾಗಿ ಅವರು ತಿಳಿಸಿದರು.
ಕೋವಿಡ್ ನಿರ್ವಹಣೆಗೆ ಹಣಕಾಸಿನ ಕೊರತೆಯಿಲ್ಲ:
ತಾಲೂಕು ಆಡಳಿತದ ನಿಧಿಯಲ್ಲೂ ಕೋವಿಡ್ ಸಂಬಂಧಿ ಅಗತ್ಯದ ವೈದ್ಯಕೀಯ ಸಲಕರಣೆ ಖರೀದಿಗೆ ಅನುದಾನವಿದ್ದು, ಜಿಲ್ಲಾಡಳಿತದಲ್ಲಿಯೂ 15 ಕೋಟಿ ಅನುದಾನವಿದೆ. ಅಗತ್ಯ ವ್ಯವಸ್ಥೆಗೆ ಬಳಸಿಕೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.ರೆಂಡಿಸೀವರ್ ಚುಚ್ಚುಮದ್ದನ್ನು ಅಗತ್ಯವಿದ್ದರೆ ಮಾತ್ರ ನೀಡಿ , ಕೋವಿಡ್ ಲಕ್ಷಣ ವುಳ್ಳವರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಮಾತ್ರ ನಿಯಮಾನುಸಾರ ಕೋವಿಡ್ ಟೆಸ್ಟ್ ನಡೆಸುವಂತೆ ಸೂಚಿಸಿದ ಅವರು, ಕೋವಿಡ್ ನಿಂದ ಮೃತರಾದವರ ಅಂತಿಮ ಸಂಸ್ಕಾರವನ್ನು ಉಚಿತವಾಗಿ ನಡೆಸಲು ಸರಕಾರದಿಂದಲು ನಿರ್ದೇಶನವಿದ್ದು, ಇದಕ್ಕಾಗಿ ಮುತುವರ್ಜಿ ವಹಿಸುವಂತೆ ಸೂಚಿಸಿದರು. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸರ್ಕಾರಿ ಆಸ್ಪತ್ರೆಗಳ ಅಂಬ್ಯುಲೆನ್ಸ್ ಗಳ ಜೊತೆಯಲ್ಲಿ ಖಾಸಗಿ ಅಂಬ್ಯುಲೆನ್ಸ್ ಗಳನ್ನು ಉಚಿತ ಸೇವೆ ನೀಡಲು ಬಳಸಬೇಕು. ಪ್ರಾಥಮಿಕ ಸಂಪರ್ಕಿತರನ್ನು ಆಸ್ಪತ್ರೆಗೆ ಸಾಗಿಸಲು ಕೂಡಸಂಚಾರಿ ದಳಗಳನ್ನು ಬಳಸುವಂತೆ ಸಲಹೆ ನೀಡಿದರು.
ಗ್ರಾ.ಪಂ.ಟಾಸ್ಕ್ಫೋರ್ಸ್ ಚುರುಕುಗೊಳಿಸಿ:
ಪ್ರತೀ ಗ್ರಾಮಪಂಚಾಯತ್ ಗಳಲ್ಲಿ ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿ ಮುತುವರ್ಜಿಯಿಂದ ಕೆಲಸಮಾಡಿದಾಗ, ಕೊರೋನಾ ನಿಗ್ರಹ ಸುಲಭ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು. ಈ ಕುರಿತಾಗಿ ವಿವರಣೆ ನೀಡಿದ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಮಾರ್, ಸರ್ಕಾರದ ಸುತ್ತೋಲೆಯಂತೆ ಪ್ರತೀ ಗ್ರಾ.ಪಂ.ಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದ್ದು, ಇದನ್ನು ಸಮರ್ಪಕವಾಗಿ ಮುನ್ನಡೆಸಲು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಈ ಸಂದರ್ಭ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ನಾಯ್ಕ್ಉಳಿಪ್ಪಾಡಿ ಯವರು, ಟಾಸ್ಕ್ ಫೋರ್ಸ್ ಸಮಿತಿ ಕುರಿತಾದ ಮಾಹಿತಿ ಕಳೆದ ಬಾರಿಯಷ್ಟು ಈ ಬಾರಿ ಅಧಿಕಾರಿ ವರ್ಗ ದಿಂದ ಸಿಕ್ಕಿಲ್ಲ ಎಂದು ಗಮನಸೆಳೆಸದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ಈ ಕುರಿತಾದ ವಿವರವನ್ನು ನೀಡುವುದರ ಜೊತೆಗೆ ಗ್ರಾಮಮಟ್ಟದಲ್ಲಿ ಈ ಸಮಿತಿಯನ್ನು ಬಲಗೊಳಿಸುವಂತೆ ಇಓರಾಜಣ್ಣ ರವರಿಗೆ ಸೂಚಿಸಿದರು. ಕೋವಿಡ್ ಸೋಂಕಿತರಿರುವ ಮನೆ, ಪರಿಸರವನ್ನು ಮೈಕ್ರೋ ಕಂಟೋನ್ಮೆಂಟ್ ಪ್ರದೇಶಗಳಾಗಿ ಗುರುತಿಸಿ, ಆ ಮನೆಮಂದಿ ಹೊರಗೆ ಬಾರದಂತೆ, ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸ್ಥಳೀಯ ಗ್ರಾ.ಪಂ.ನ ಟಾಸ್ಕ್ ಫೋರ್ಸ್ ಸಮಿತಿ ಮೂಲಕ ಒದಗಿಸುವಂತೆ ಎಂದು ಸಲಹೆ ನೀಡಿದರು.
ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚುವುದು ಬಹುಮುಖ್ಯ ಕೆಲಸವಾಗಿದ್ದು , ಈ ಕೆಲಸಕ್ಕೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರಯರನ್ನೂ ಬಳಸಿಕೊಳ್ಳಬಹುದಾಗಿದೆ, ಸಹಕಾರ ನೀಡದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಅತ್ಯಂತ ಕಡಿಮೆ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಿದ ಪೂಂಜಾಲಕಟ್ಟೆ ಹಾಗೂ ಪಂಜಿಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಫರಂಗಿಪೇಟೆಯಲ್ಲಿ ಲಾಕ್ ಡೌನ್ ಉಲ್ಲಂಘನೆಯ ಬಗ್ಗೆ ದೂರುಗಳು ಬರುತ್ತಿದೆ, ಅಲ್ಲದೆ ಸೋಂಕಿತರು ಅಥವಾ ಪ್ರಾಥಮಿಕ ಸಂಪರ್ಕಿತರು ಸುತ್ತಾಟ ನಡೆಸುವುದರ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ನಿಗಾವಹಿಸುವಂತೆ ಸೂಚಿಸಿದರು.
ಪುರಸಭೆಯಲ್ಲಿ ವಿಶೇಷ ಸಭೆ ನಡೆಸಬೇಕು: ಕೋಟ
ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೋವಿಡ್ ಪ್ರಕರಣ ಹಾಗೂ ಅವುಗಳ ನಿಯಂತ್ರಣ ಕುರಿತಾಗಿ ಅಧಿಕಾರಿಗಳು-ಜನಪ್ರತಿನಿಧಿಗಳು ಸಮನ್ವಯದಿಂದ ಕೆಲಸಮಾಡಬೇಕು, ತಕ್ಷಣವೇ ಶಾಸಕರ ನೇತೃತ್ವದಲ್ಲಿ ವಿಶೇಷ ಸಭೆ ನಡೆಸುವ ಮೂಲಕ ಸಮಸ್ಯೆಗಳ ನ್ನು ಬಗೆಹರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಲಹೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಬೆಂಗಳೂರು ಹಾಗೂ ಇತರೆಡೆಗಳಿಂದ ಬಂದವರನ್ನು ಅವರವರ ಮನೆಗಳಲ್ಲಿಯೇ ಕ್ವಾರಂಟೈನ್ ಮಾಡಬೇಕು, ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆಗೆ ಒಳಪಡಿಸಬೇಕೆಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಮಾಹಿತಿ ನೀಡಿ, ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿ 542 ಸಕ್ರೀಯ ಕೋವಿಡ್ ಪ್ರಕರಣಗಳಿದ್ದು, ಈ ಪೈಕಿ ಹೊರ ತಾಲೂಕಿನ 93 ಪ್ರಕರಣಗಳೂ ಇವೆ. ತಾಲೂಕಿನ 391 ಮಂದಿ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರೆ, 12 ಮಂದಿ ಸರ್ಕಾರಿ ಆಸ್ಪತ್ರೆ ಹಾಗೂ 34 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇರಾ ಗ್ರಾಮದ ಒಂದು ಮನೆಯ ಐದುಮಂದಿಯಲ್ಲಿ ಹಾಗೂ ಬಿಕಸ್ಬಾ ಗ್ರಾಮದ ಪಲ್ಲಮಜಲುವಿನ ಒಂದೇ ಮನೆಯ 7 ಮಂದಿಯಲ್ಲಿಕೋವಿಡ್ ಫಾಸಿಟಿವ್ ಬಂದಿದ್ದು, ಕಂಟೋನ್ ಮೆಂಟ್ ಏರಿಯಾ ಎಂದು ಘೋಷಿಸಲಾಗಿದೆ ಎಂದು ವಿವರ ನೀಡಿದರು. ಕೋವಿಡ್ ನಿಯಂತ್ರಣಕ್ಕೆಪೂರಕವಾಗಿ ತಾಲೂಕಿನ ತುಂಬೆ ಫಾದರ್ ಮುಲ್ಲರ್ಸ್, ಬಿ.ಸಿ.ರೋಡಿನಸೋಮಯಾಜಿ ಆಸ್ಪತ್ರೆ ಹಾಗೂ ಪರ್ಲಿಯ ಆಸ್ಪತ್ರೆಯ ನೆರವು ಪಡೆದುಕೊಳ್ಳಲಾಗಿದ್ದು, ಕೋವಿಡ್ ಪ್ರಕರಣಗಳಿಗೆ ಬೆಡ್ ಗಳನ್ನು ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.
ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಅಧ್ಯಕ್ಷ ಮಹಮ್ಮದ್ಶರೀಫ್, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವರ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬಂಟ್ವಾಳ ಇಓ ರಾಜಣ್ಣ,ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ,ತುಂಬೆ ಆಸ್ಪತ್ರೆಯ ಸುಪರಿಟೆಂಡೆಂಟ್ ಡಾ.ಕಿರಣ್, ಮೊದಲಾದವರು ಉಪಸ್ಥಿತರಿದ್ದರು.