ಕುಂದಾಪುರ, ಮೇ 01 (DaijiworldNews/MB) : ಕುಂದಾಪುರದ ಜ್ಯೂನಿಯರ್ ಕಾಲೇಜಿನ ಕಲಾ ಮಂದಿರದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಶುಕ್ರವಾರ ಒಂದೇ ದಿನ ಇಲ್ಲಿ 334 ಮಂದಿಗೆ ಲಸಿಕೆ ನೀಡಲಾಗಿದೆ. ಶನಿವಾರ 70 ಜನರಿಗೆ ಲಸಿಗೆ ನೀಡಲಾಗಿದೆ. ದಿನದಿಂದ ದಿನಕ್ಕೆ ಲಸಿಕೆಗೆ ಆಗಮಿಸುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು ಲಸಿಕೆಯ ಕೊರತೆಯೂ ಕಾಡುತ್ತಿದೆ. ಕುಂದಾಪುರ ಪುರಸಭೆ ವ್ಯಾಪ್ತಿ ಮಾತ್ರವಲ್ಲದೇ ಬೇರೆ ಬೇರೆ ಭಾಗಗಗಳಿಂದಲೂ ಜನ ಇಲ್ಲಿಗೆ ಲಸಿಕೆ ಪಡೆಯಲು ಬರುತ್ತಿದ್ದಾರೆ.
ಕೊರೋನಾ ಪ್ರಕರಣಗಳ ವ್ಯಾಪಕವಾಗಿ ಹೆಚ್ಚಾಗುತ್ತಿರುವುದರಿಂದ 45 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಇಲ್ಲಿ ಉತ್ತಮ ವ್ಯವಸ್ಥೆಯಿದ್ದು ಬಂದ ಜನರು ಮೊದಲು ಕಾಲೇಜು ಆವರಣದಲ್ಲಿ ಮರದ ನೆರಳಿನಲ್ಲಿ ಕುಳಿತುಕೊಳ್ಳಲು ಕುರ್ಚಿಗಳನ್ನು ಹಾಕಲಾಗಿದೆ. ಅಲ್ಲಿಂದ ನೊಂದಣಿ ಮಾಡಿಸಿಕೊಂಡು, ಒಳಗಡೆ ಹೋಗಲು ಬಿಡಲಾಗುತ್ತದೆ. ಹಾಲ್ ವಿಶಾಲವಾದ್ದರಿಂದ ಒಳಗಡೆ ವೈಯಕ್ತಿಕ ಅಂತರ ಕೊಟ್ಟು ವಿಶ್ರಾಂತಿಗೆ ಅವಕಾಶವಿದೆ.
ಸಂಘ ಸಂಸ್ಥೆಗಳ ಸಹಭಾಗಿತ್ವ
ಕೋವಿಡ್ ಲಸಿಕೆಯ ಈ ಕಾರ್ಯಕ್ರಮಕ್ಕೆ ಕುಂದಾಪುರ ಕಲಾ ಕ್ಷೇತ್ರ, ರಕ್ಷಾ ಚಾರಿಟೆಬಲ್ ಟ್ರಸ್ಟ್ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ, ಶ್ರೀ ರಾಮ ಸೇವಾ ಸಂಘ ಕೋಟೇಶ್ವರ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೋಟೇಶ್ವರ, ಜೆಸಿಐ ಕುಂದಾಪುರ ಮೂಲಸೌಕರ್ಯ ಒದಗಣೆ, ಕುಡಿಯುವ ನೀರು,ಸ್ವಯಂಸೇವಕರು, ತಾಂತ್ರಿಕ ಪರಿಕರ, ಊಟದ ವ್ಯವಸ್ಥೆ ಮಾಡಿದ್ದಾರೆ.
ಲಸಿಕೆ ಪಡೆಯಲು ಬಂದವರನ್ನು ಕೂಡಾ ಆತ್ಮೀಯವಾಗಿ ಮಾತನಾಡಿಸಿ, ನೋಂದಣಿ ಮಾಡಿಸಿ, ಸೂಕ್ತ ಮಾರ್ಗದರ್ಶನ ಮಾಡಿ ಲಸಿಕೆ ಪಡೆಯಲು ಕಳಿಸುತ್ತಿರುವ ಸ್ವಯಂಸೇವಕರ, ಅಧಿಕಾರಿಗಳ ಸೇವಾ ವೈಖರಿ ಮೆಚ್ಚುಗೆಗೆ ಪಾತ್ರವಾಗುತ್ತಿವೆ.
ಕಲಾಕ್ಷೇತ್ರದ ಕಿಶೋರ್ ಕುಮಾರ್, ರಾಜೇಶ ಕಾವೇರಿ, ಅನಿಲ್ ಉಪ್ಪೂರು, ಶ್ರೀಧರ ಸುವರ್ಣ, ಹೇಮಾ, ನವ್ಯ ಕೋಟೇಶ್ವರ, ರಾಘವೇಂದ್ರ ಭಟ್, ಪ್ರಶಾಂತ ಸಾರಂಗ, ಕಮಲ್, ವೈಷ್ಣವಿ ಕೋಟೇಶ್ವರ, ಮುರಳಿ ಜಪ್ತಿ, ಸುಹಾಸ್ ಕೋಟೇಶ್ವರ, ರಾಮಚಂದ್ರ ಮೊದಲಾದವರು ಸ್ವಯಂಸೇವಕರಾಗಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ.