ಮಂಗಳೂರು, ಮೇ 01 (DaijiworldNews/MB) : ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಹಾಗೂ ಲ್ಲೆಯಲ್ಲಿ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಅಧಿಕಗೊಳಿಸಲು ಸರ್ಕಾರವು ಪ್ರಯತ್ನಗಳನ್ನು ಮಾಡುತ್ತಿದ್ದು ಮಂಗಳೂರಿನ ಮಸೀದಿಗಳು ಕೊರೊನಾ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ಸಜ್ಜಾಗುತ್ತಿವೆ.
ಸಾಂದರ್ಭಿಕ ಚಿತ್ರ
ಈಗಾಗಲೇ, ಮಸೀದಿಗಳ ಮುಖಂಡರು ಮಂಗಳೂರು ಮಸೀದಿ ಸಂಘವನ್ನು ರಚಿಸಿದ್ದಾರೆ. ಹಾಗೆಯೇ ಸಂಘವು ತಜ್ಞರೊಂದಿಗೆ ಚರ್ಚಿಸಿದ್ದು ಈಗ ಮುನ್ನೆಚ್ಚರಿಕೆ ಕ್ರಮವಾಗಿ ಕೊರೊನಾ ಆರೈಕೆ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಬೆಂಗಳೂರು, ಮುಂಬೈ, ದೆಹಲಿ, ಮತ್ತು ಇತರ ಸ್ಥಳಗಳಲ್ಲಿ ಜನರು ಬಳಲುತ್ತಿರುವಂತೆ ನಗರದಲ್ಲಿ ಜನರು ತೊಂದರೆ ಅನುಭವಿಸಬಾರದು ಎಂಬ ಉದ್ದೇಶವನ್ನು ಸಮತಿಯು ಹೊಂದಿದೆ. ಬಂದರ್ ಬಳಿ ಕೊರೊನಾ ಆರೈಕೆ ಕೇಂದ್ರ, ಜಪ್ಪಿನಮೊಗರುವಿನಲ್ಲಿ ಶಿಕ್ಷಣ ಸಂಸ್ಥೆಯೊಂದರಲ್ಲಿ, ಬಬ್ಬುಕಟ್ಟೆಯಲ್ಲಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಾಗೂ ಹಲವಾರು ಸ್ಥಳಗಳಲ್ಲಿ ಆರೈಕೆ ಕೇಂದ್ರ ಸ್ಥಾಪನೆಗೆ ಸಂಘವು ಚರ್ಚಿಸಿದೆ. ಈ ಸ್ಥಳಗಳಲ್ಲಿ ಸರಿಯಾದ ಮೂಲಸೌಕರ್ಯಗಳು ಲಭ್ಯವಿದ್ದರೆ ಕೊರೊನಾ ರೋಗಿಗಳನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ.
ಈ ನಿಟ್ಟಿನಲ್ಲಿ ಅನುಮತಿ ಮತ್ತು ಸಹಕಾರಕ್ಕಾಗಿ ಸಂಘದ ಪ್ರತಿನಿಧಿಗಳು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಅವರನ್ನು ಭೇಟಿ ಮಾಡಿದ್ದಾರೆ. ಏತನ್ಮಧ್ಯೆ ಕೆಲವು ಸಂಸ್ಥೆಗಳು ಉಚಿತ ಲಸಿಕೆಗಳನ್ನು ನೀಡಲು ಮುಂದೆ ಬಂದಿವೆ. ಲಸಿಕೆಯನ್ನು ಮಸೀದಿಗಳಲ್ಲಿ ನೀಡಲು ಯೋಜಿಸಲಾಗಿದೆ. ಲಸಿಕೆಗಳ ಕೊರತೆಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿರುವುದರಿಂದ, ಮುಂಬರುವ ದಿನಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಂಘ ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ವ್ಯಾಕ್ಸಿನೇಷನ್ ನೀಡಲು 18 ವರ್ಷಕ್ಕಿಂತ ಮೇಲ್ಪಟ್ಟ ಹೆಸರುಗಳನ್ನು ದಾಖಲಿಸಲು ಸಂಘವು ಯೋಜಿಸುತ್ತಿದೆ. ಡೋಸ್ ಪಡೆದ ಬಳಿಕ ರಕ್ತದಾನ ಮಾಡುವ ಅವಕಾಶವಿಲ್ಲದ ಕಾರಣ, ಬ್ಲಡ್ಬ್ಯಾಂಕ್ ಸಿಬ್ಬಂದಿಗಳ ಸಹಾಯದೊಂದಿಗೆ ಮಸೀದಿಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಲು ಸಂಘವು ಯೋಜಿಸಿದೆ. ರಕ್ತದಾನ ಶಿಬಿರಗಳನ್ನು ನಡೆಸಲು ಅನುಮತಿಗಾಗಿ ಡಿಸಿಯನ್ನು ಸಂಪರ್ಕಿಸಲು ಮತ್ತು ರಕ್ತದಾನ ಶಿಬಿರಗಳಿಗೆ ದಾನಿಗಳನ್ನು ಆಹ್ವಾನಿಸಲು ಸಂಘವು ನಿರ್ಧರಿಸಿದೆ.
ಮಂಗಳೂರು ಮಸೀದಿ ಸಂಘದ ಜೊತೆಗೆ, ಅಖಿಲ ಭಾರತ ಮುಸ್ಲಿಂ ಅಭಿವೃದ್ಧಿ ಮಂಡಳಿ (ಎಐಎಂಡಿಸಿ), ಮಸ್ಜಿದ್ ಒನ್ ಮೂವ್ಮೆಂಟ್ ಚಾಪ್ಟರ್ ತರಬೇತಿ ಮತ್ತು ಮಾರ್ಗದರ್ಶನ ನೀಡಲಿದೆ. ಈಗಾಗಲೇ ಯೋಜನೆಯ ಬಗ್ಗೆ 20 ಕ್ಕೂ ಹೆಚ್ಚು ವೈದ್ಯರೊಂದಿಗೆ ಸಂಘ ಚರ್ಚಿಸಿದೆ. ಆಮ್ಲಜನಕವನ್ನು ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಸಂಘದ ಸಂಚಾಲಕರಾಗಿ ಅಹ್ಮದ್ ಮೊಹಿಯುದ್ದೀನ್ ಅವರನ್ನು ನೇಮಿಸಲಾಗಿದೆ. ಡಾ.ಜಲಾಲುದ್ದೀನ್, ಡಾ.ಸಮೀರ್, ಡಾ.ಅಬ್ದುಲ್ ಸಮ್ಮದ್, ಬಿ.ಎಂ.ಮುಮ್ತಾಜ್ ಅಲಿ ಕೃಷ್ಣಾಪುರ, ಝಕಾರಿಯ ಫೆರ್ವಾಜ್ ಹಾಗೂ ಇತರರು ಸಂಘದಲ್ಲಿದ್ದಾರೆ.